ಗುರುವಾರ, ನವೆಂಬರ್ 24, 2011

ಬೇರೆ ನಾಡುಗಳಲ್ಲಿ ಕನ್ನಡದ ಸಸಿಗಳನ್ನು ನೆಡುವುದೀಗ ಆಗಬೇಕಿದೆಯೇ?


ಕನ್ನಡ ನುಡಿ, ಬದುಕು ಬರಹಗಳನ್ನು ಬೇರೆ ನುಡಿಯವರಿಗೆ ಕಲಿಸುವ, ಆ ಮೂಲಕ ಕನ್ನಡದ ಕಸುವನ್ನು ಬಲಗೊಳಿಸಲು ಕೆಲಸಕ್ಕಾಗಿ ಬೇರೆ ಬೇರೆ ನಾಡುಗಳಲ್ಲಿ ಕನ್ನಡ ’ಪೀಠ’ಗಳನ್ನು ನೆಲೆಗೊಳಿಸಬೇಕೆಂಬ ಮಾತು ಈಗ ಹೆಚ್ಚಾಗಿ ಕೇಳತೊಡಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವೇ ಮೊದಲಾಗಿ ಹಲವರು ಈ ನಿಟ್ಟಿನಲ್ಲಿ ತಮ್ಮ ದನಿ ಸೇರಿಸುತ್ತಿದ್ದಾರೆ. ಇಂತಹ ಮಾತು ಮೊದಲಾಗಿ ಸರಿ ಸುಮಾರು ಇಪ್ಪತ್ತೈದು ವರುಶಗಳೇ ಸಂದಿವೆ. ನಾನು ಇದನ್ನೇ ನಂಬಿದ್ದವನು. ಆಗ ಅಮೆರಿಕದ ಒಂದು ವಿಶ್ವವಿದ್ಯಾಲಯದಲ್ಲಿ ಕನ್ನಡ ಓದಿನ ಸವಲತ್ತು ದೊರೆಯುವಂತೆ ಮಾಡಲು ಅಲ್ಲಿನ ಕನ್ನಡಿಗರೊಡನೆ ಮುಂದಾವನೇ ಸರಿ. ಆದರೆ ಈಗ ಅನ್ನಿಸುತ್ತಿರುವುದೇ ಬೇರೆ. ಹೀಗೆ ಮಾಡಬೇಕೆಂಬ ಉಮೇದು ನಮ್ಮ ಕಡೆಯಿಂದ ಮೊದಲಾಗಿರುವಂತೆ ಬೇರೆ ನಾಡುಗಳ ಜನರಲ್ಲಿ ನಮಗೆ ಕನ್ನಡ ಬೇಕು ; ಕನ್ನಡ ಬದುಕನ್ನು ಅರಿಯಬೇಕು ಎಂಬ ತುರ್ತು ನಮಗೆ ಕಾಣಬರುತ್ತಿಲ್ಲ. ಅವರಲ್ಲಿ ಇಂತಹ ಬಯಕೆ ಮೂಡುವಂತೆ ನಮ್ಮ ಸಾಮಗ್ರಿಗಳನ್ನು ಮಾರುಕಟ್ಟೆಗೆ ತಕ್ಕಂತೆ ಹೊಂದಿಸಿಡಬೇಕೆಂಬ ನಿಲುವು ನಮ್ಮದಾಗಬೇಕೇ? ಒಂದು ವೇಳೆ ಕನ್ನಡ ನುಡಿ,ಬರಹ ಮತ್ತು ಬದುಕನ್ನು ಬೇರೆ ನುಡಿಯವರು ಅರಿಯುವಂತೆ ಮಾಡುವಲ್ಲಿ ನಾವು ಗೆದ್ದೆವಾದರೆ ಅದರಿಂದ ನಮ್ಮ ಸುತ್ತಮತ್ತಣ ಬದುಕು ಹಸನಾಗುವುದೇ?
ಕನ್ನಡ ನುಡಿಯನ್ನು ಈ ನಾಡಿನಲ್ಲೇ ಎಲ್ಲರ ನುಡಿಯನ್ನಾಗಿ ಮಾಡಲು, ನಮ್ಮ ಬದುಕನ್ನು ಕಟ್ಟಿಕೊಳ್ಳುವ ನೆಲೆಯನ್ನಾಗಿ ಕನ್ನಡವನ್ನು ಬೆಳೆಸಲು ಇನ್ನೂ ಅಗಿಲ್ಲ. ಆ ದಿಕ್ಕಿನಲ್ಲಿ ನಾವು ಏನೂ ಮಾಡುತ್ತಿಲ್ಲ. ಬದಲಿಗೆ ಇಲ್ಲಿ ಹುಟ್ಟಿ ಬೆಳೆವ ಮಕ್ಕಳಿಗೆ ಕನ್ನಡ ಒಂದು ಹೊರೆ ಎಂಬಂತೆ ಮಾಡುತ್ತಿದ್ದೇವೆ. ಕನ್ನಡ ಬದುಕನ್ನು ಅರಿಯಲು ಇಂಗ್ಲಿಶನ್ನು ನೆಮ್ಮಿ ಹೊರಟಿದ್ದೇವೆ. ಹೆಚ್ಚಿನ ಕಲಿಕೆಯಲ್ಲಿ ಕನ್ನಡಕ್ಕೆ ದೊರೆಯಬೇಕಾದ ಜಾಗವನ್ನು ನೀಡಲು ನಮಗಿನ್ನೂ ಆಗಿಲ್ಲ. ಈ ದಿಕ್ಕಿನಲ್ಲಿ ಬೇಕಾದ ಕೆಲಸಗಳನ್ನು ಕೈಗೊಳ್ಳದೆ ಯಾವುದೋ ನಾಡುಗಳಲ್ಲಿ ಕನ್ನಡ ಸಸಿಯನ್ನು ನಟ್ಟು ಬೆಳೆಸಿ ಹೆಮ್ಮೆ ಪಡುವ ಹುಮ್ಮಸ್ಸು ಏಕೆ? ಅದೂ ಇಂಗ್ಲಿಶ್ ಇಲ್ಲವೇ ಯೂರೋಪಿನ ನುಡಿಗಳನ್ನಾಡುವ ನಾಡುಗಳಲ್ಲೇ ಇಂತಹ ಕೆಲಸಗಳನ್ನು ಮಾಡಬೇಕೆಂದು ಮುಂದಾಗಿದ್ದೇವೆ. ಚೀನಾ,ಜಪಾನ್,ಕೊರಿಯಾ, ಟಿಬೆಟ್ ಮುಂತಾದ ನಾಡುಗಳು ನಮ್ಮ ಕಣ್ಣೆದುರಿಗೆ ಸುಳಿಯುವುದೂ ಇಲ್ಲ.ಇದೂ ಒಂದು ಅಚ್ಚರಿಯೇ ಸರಿ.
ಇಂಡಿಯಾದ ಬೇರೆ ನುಡಿಗಳನ್ನಾಡುವ ಕಡೆಗಳಲ್ಲಿ ಕೂಡ ಕನ್ನಡವೆಂಬುದು ಕಡೆಗಣನೆಗೆ ಒಳಗಾಗಿದೆ ಎಂಬು ಕೊರಗುತ್ತೇವೆ. ಸರಿ. ಆದರೆ ಹೀಗಾಗಿರುವುದಕ್ಕೆ ಎರಡು ನೆಲೆಗಳಿವೆ. ೧.ಬೇರೆಯವರಿಗೆ ನಮ್ಮ ನುಡಿ,ಬದುಕು,ಬರಹಗಳನ್ನು ತಿಳಿಯುವ ಬಯಕೆ ಇಲ್ಲದಿರುವುದಕ್ಕೆ ನಮ್ಮನ್ನು ನಾವು ಅವರೆದರು ಸುಳಿದಾಡಿ ಒಲಿಸಿಕೊಳ್ಳದಿರುವುದೇ ಕಾರಣ; ಅದಕ್ಕಾಗಿ ಕೋಟಿಗಟ್ಟಲೆ ಕಾಸನ್ನು ಮುಡಿಪಿಡಬೇಕೆಂದು ಬಯಸುವುದರಿಂದ ಏನೂ ಆಗುವುದಿಲ್ಲ. ಬೇರೆ ನುಡಿಯವರು ನಮ್ಮನ್ನು ಅರಿಯಲು ಮುಂದಾಗುವಂತೆ ನಮ್ಮ ಕಸುವನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ. ನಾವೇ ನಮ್ಮಲ್ಲಿ ನಂಬಿಕೆಯನ್ನು ಗಟ್ಟಿ ಮಾಡಿಕೊಳ್ಳಬೇಕಾಗಿದೆ. ಈಗ ಏನಾಗಿದೆ? ಕಲಿಕೆಯಲ್ಲಿ ಕನ್ನಡಕ್ಕೆ ಹಿಂದಿನ ಮಣೆ; ಸಂಸ್ಕೃತ ಮತ್ತು ಇಂಗ್ಲಿಶಿನ ಹೊರೆಯಿಂದ ಬದುಕನ್ನು ಅರಿಯುವ ನಮ್ಮ ಹತ್ಯಾರುಗಳು ನಮಗೇ ಗೊತ್ತಿಲ್ಲದಂತೆ ನಮ್ಮನ್ನು ಇನ್ನಷ್ಟು ಕುಗ್ಗಿಸುತ್ತಿವೆ. ಜನರ ಬದುಕಿಗೂ ನಾವು ಕಟ್ಟುತ್ತಿರುವ ಅರಿವಿಗೂ ಯಾವ ನಂಟೂ ಇಲ್ಲವೆಂಬಂತಾಗಿದೆ. ಇದು ಇಂಗ್ಲಿಶನ್ನೇ ಮೊದಲ ಮಣೆಯಲ್ಲಿ ಕೂರಿಸಿಕೊಂಡವರು ನೀಡುತ್ತಿರುವ ತಿಳುವಳಿಕೆಗೆ ಹೊಂದುವಂತೆ, ಕನ್ನಡದ ಮೂಲಕ ಕನ್ನಡ ಬದುಕನ್ನು ಅರಿಯುವ ಕಡೆಗೆ ಮೊಗ ಮಾಡಿರುವವರು ಕಟ್ಟುತ್ತಿರುವ ತಿಳುವಳಿಕೆಗೂ ಹೊಂದುತ್ತದೆ. ಏಕೆಂದರೆ ಕನ್ನಡ ಮೂಲಕ ದೊರೆಯುತ್ತಿರುವ ಈ ತಿಳಿವಳಿಕೆಯೂ ಇಂಗ್ಲಿಶಿನ ನೆರಳೇ ಆಗಿದೆ.
೨. ಬೇರೆ ನಾಡುಗಳಲ್ಲಿ ಹಲವಾರು ವರುಶಗಳಿಂದ ಕನ್ನಡ ನುಡಿ,ನಾಡು,ಬರಹ,ಬದುಕನ್ನು ಅರಿತು ,ಅದರ ಕಸುವನ್ನು ತಿಳಿಯಲು ಮುಂದಾದವರೂ ಇದ್ದಾರೆ. ಅವರಲ್ಲಿ ಅಲ್ಲಿ ಹೋಗಿ ಓದು ಮುಂದುವರೆಸಿದ ಕನ್ನಡಿಗರಿರುವಂತೆ ಬೇರೆ ನುಡಿಯನ್ನಾಡುವವರೂ ಇದ್ದಾರೆ. ಇಂತಹವರೂ ಇಲ್ಲಿಬಂದು ತಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಂಡಿರುವುದೂ ಉಂಟು. ಆದರೆ ಅವರ ಎಲ್ಲ ಬರಹಗಳೂ ಇಂಗ್ಲಿಶ್, ಫ್ರೆಂಚ್, ಜರ‍್ಮನ್ ಮುಂತಾದ ನುಡಿಗಳಲ್ಲಿವೆ. ಈಗ ಹೆಚ್ಚಿನ ಕಲಿಕೆಯಲ್ಲಿ ತೊಡಗಿಕೊಂಡಿರುವ ಸಾವಿರಾರು ಮಕ್ಕಳಿಗೆ ಆ ತಿಳುವಳಿಕೆ ದಕ್ಕುತ್ತಲೇ ಇಲ್ಲ. ಆ ತಿಳಿವೆಲ್ಲ ಅಚ್ಚಿನ ಪುಟಗಳಲ್ಲಿ ಅಡಗಿ ಕುಳಿತಿದೆ. ಅದೆಲ್ಲವನ್ನೂ ಕನ್ನಡ ಮಕ್ಕಳು ಓದ ಬೇಕೆಂದು ಈ ಮಾತು ಹೇಳುತ್ತಿಲ್ಲ. ಇಂಗ್ಲಿಶಿನಲ್ಲಿ ಇಲ್ಲವೇ ಬೇರೆ ನುಡಿಗಳಲ್ಲಿ ಮೈತಳೆದ ಆ ತಿಳಿವಿಗೆ ಕನ್ನಡದ ಚೌಕಟ್ಟು ಇಲ್ಲ. ಅದು ಈ ಬದುಕಿನೊಳಗಿಂದ ಹುಟ್ಟಿದ ತಿಳುವಳಿಕೆಯಲ್ಲ. ಹಾಗಾಗಿ ಅದರ ಹೆಚ್ಚುಪಾಲು ನಮಗೆ ತಿಳಿಯದಿದ್ದರೂ ಕೊರತೆ ಏನಿಲ್ಲ.
ಈಗ ನಾವು ಹೊರ ನಾಡುಗಳಲ್ಲಿ ಕನ್ನಡದ ಬಾವುಟವನ್ನು ನೆಡಬೇಕೆಂದು ಹೊರಟಿರುವುದು ಮತ್ತೆ ಇಂತಹುದೇ ತಿಳಿವನ್ನು ಕಟ್ಟಲೆಂದು ತಾನೆ? ಜೊತೆಗೆ ಇಂತಹ ತಿಳುವಳಿಕೆಯನ್ನು ಕಟ್ಟುವವರಿಗೆ ಬೇಕಾದ ಪರಿಕರ, ತರಬೇತುಗಳನ್ನು ನೀಡುವುದೇ ನಮ್ಮ ಗುರಿಯೇನು? ಇದರಿಂದ ಈ ನಾಡ ಜನರಿಗೆ ದೊರಕುವುದಾದರೂ ಏನು?
ಇವೆಲ್ಲ ಮಾತುಗಳು ನುಡಿಯ ಬಗೆಗೆ ಹೆಮ್ಮೆ ಇಲ್ಲದವರ ಬಡಬಡಿಕೆ ಎಂದು ತಿಳಿಯಬಾರದು.ಹಾಗೆ ತಿಳಿದು ದಿಟವಾದ ಗೊಂದಲವನ್ನು ಅರಿಯದೇ ಬೇರೆ ಕಡೆ ಮೊಗದಿರುಹ ಬಾರದು. ಮನೆಗೆದ್ದು ಮಾರುಗೆಲ್ಲು ಎಂಬ ನಾಣ್ನುಡಿಯನ್ನು ನೆನೆಯೋಣ. ಇಲ್ಲಿ ನಮ್ಮ ತಿಳಿವಿನ ಹಾದಿಗಳನ್ನು ನೇರ್ಪಡಿಸಿಕೊಂಡು ಕನ್ನಡ ನುಡಿ ಜನರ ನಂಬಿಕೆಯ ನೆಲೆಯಾಗುವಂತೆ ಮಾಡಬೇಕಿದೆ. ಇದು ಆಗದೆ ಬರಿ ಹೆಮ್ಮೆಯನ್ನೇ ನಂಬಿ ಮುನ್ನುಗ್ಗುವುದು ಸರಿಯಾಗದು ಎಂಬ ಅರಿವು ಮೂಡಬೇಕು.

ಸೋಮವಾರ, ನವೆಂಬರ್ 21, 2011

ನೆಲದ ಮೇರೆಗಳ ಕರ್ನಾಟಕ

ನೆಲದ ಮೇರೆಗಳನ್ನು ಕರ್ನಾಟಕ ಎಂದು ಕರೆದದ್ದು ಒಂದು ರಾಜಕೀಯ ಆಯ್ಕೆ. ಅದಕ್ಕಾಗಿ ಹಂಬಲಿಸಿ,’ಹೋರಾಡಿದ’ವರೂ ಬಿಸಿಲುಗುದುರೆಯ ಬೆನ್ನು ಹತ್ತಿದ್ದವರು. ಬೇರೆಬೇರೆ ನುಡಿಯಾಡುವವರ ಆಳ್ವಿಕೆಯಿಂದ ಹೊರಬರಲು ’ಕರ್ನಾಟಕ ರತ್ನ ಸಿಂಹಾಸನದ’ ಒಡೆಯರಾಗಿದ್ದ ಮೈಸೂರು ಅರಸರ ನೆರಳಿಗಾಗಿ ಕಾತರಿಸಿದ್ದವರು. ಕರ್ನಾಟಕವೆಂದು ಹುಟ್ಟಿದ್ದು ದಿಟವಾಗಿ ’ವಿಶಾಲ ಮೈಸೂರು’ ಮಾತ್ರವೇ ಆಗಿತ್ತು.. ಮೊದಲಿದ್ದ ಹಳೆಯ ಮೈಸೂರು ಇನ್ನಷ್ಟು ಜಿಲ್ಲೆಗಳಿಗೆ ಹರಡಿಕೊಂಡು ದೊಡ್ಡದಾಯಿತು. ದಿಟವಾಗಿ ಕರ್ನಾಟಕವೆಂಬ ಬಿಂಬವೊಂದು ಜನರಲ್ಲಿ ಬೇರೂರಲು ಇರಬೇಕಾಗಿದ್ದ ಬದುಕಿನ ನೆಲೆಯ ಒತ್ತಡಗಳು ಅಂದು ಬಲವಾಗಿ ಇದ್ದಂತೆ ತೋರುವುದಿಲ್ಲ.
ಇಂದಿಗೂ ಕರ್ನಾಟಕವನ್ನು ನೆಲದ ಗಡಿಗೆರೆಗಳು ಕಟ್ಟುತ್ತಿರುವ ನಾಡಿನ ಮೂಲಕವೇ ರಾಜಕೀಯವಾಗಿ ಉಸಿರಾಡಿಸುತ್ತ ಉಳಿಸಿಕೊಳ್ಳಲಾಗಿದೆ. ಬದುಕಿನ ತೆರದ ದಾರಿಗಳು ಜನರು ಈ ಗಡಿಗೆರೆಗಳನ್ನು ದಾಟಿ ಒಳಹೊರಗೆ ನಡೆಯುತ್ತಿಲೇ ಇದ್ದಾರೆ .ಇವರು ಕೂಲಿಕಾರರಿರಬಹುದು; ಉದ್ದಿಮೆದಾರರಿರಬಹುದು, ಬಗೆಬಗೆಯ ವ್ಯಾಪಾರಗಳಲ್ಲಿ ತೊಡಗಿದವರಿರಬಹುದು. ಇವರೆಲ್ಲರಿಗೂ ಕರ್ನಾಟಕವೆಂದರೆ ಇಂದು ರಾಜಕೀಯ ಚಹರೆಯೇ ಹೊರತು ಕುವೆಂಪು ಬಯಸಿದಂತೆ ಮಂತ್ರವಾಗಲಿಲ್ಲ. ಹಾಗಾಗಲಿಲಗಲ ಎಂದು ಹಳಹಳಿಕೆಯಲ್ಲಿ ಈ ಮಾತನ್ನು ಹೇಳುತ್ತಿಲ್ಲ. ಬದಲಿಗೆ ಇಂದು ನಾವು ನೋಡುತ್ತಿರುವ ಬೇರು ಸತ್ತ ಮರದಂತ ಕರ್ನಕದ ಉಸಿರು ಕುಗ್ಗಿಸಲು ಐದಾರು ದಾಸಕಗಳಿಂದ ಎಡೆಬಿಡದೆ ಹುನ್ನಾರಗಳು ನಡೆಯುತ್ತಲೇ ಇವೆ ಎಂಬುದನ್ನು ಗಮನಿಸಿದಾಗ ಹೀಗಾಗಿದ್ದು ತಟಕ್ಕನೇ ಆದುದಲ್ಲ. ಹೀಗಾಗಲೆಂಬ ಬಯಕೆಯೂ ರಾಜಕೀಯವಾಗಿ ಕೆಲಸಮಾಡಿದಂತಿದೆ.
ಕರ್ನಾಟಕವೆಂಬ ರಾಜ್ಯದ ಚಹರೆಯನ್ನು ಕಟ್ಟಲು ಚರಿತ್ರೆ,ಸಮಾಜ,ರಾಜಕಾರಣ,ಬದುಕಿನ ಬಗೆ ಇವೇ ಮುಂತಾದ ಹಲವು ನೆಲೆಗಳನ್ನು ಬಳಸಿಕೊಳ್ಳಲಾಗಿದೆ. ಈ ನೆಲೆಗಳಲ್ಲಿ ಕಟ್ಟಿದ ಕರ್ನಾಟಕಗಳು ಒಂದರೊಡನೊಂದು ತಾಳೆಯಾಗುತ್ತವೆಯೇ ಎಂಬುದನ್ನು ಅರಿಯಲು ಯಾರೂ ಮುಂದಾಗಿಲ್ಲ. ಹಾಗೆ ನೋಡಲು ಹೊರಟರೆ ಇವೆಲ್ಲವೂ ಬೇರೆ ಬೇರೆ ಆಗಿಯೇ ಉಳಿದು ಬಿಟ್ಟಿವೆ ಎನ್ನುವುದು ಕಣ್ಣಿಗೆ ರಾಚುವಂತಿದೆ. ಇವೆಲ್ಲವನ್ನೂ ಹಿಡಿದು ಕಟ್ಟುವ ಕರ್ನಾಟಕವೆಂಬ ಒಂದು ಗುರುತು ಮೈದಳೆಯಲು ಈವರೆಗೆ ಆಗಿಲ್ಲ. ಚರಿತ್ರೆಯ ನೆರವಿನಿಂದ ಕಟ್ಟಿದ ಕರ್ನಾಟಕವೆಂಬುದು ಒಂದು ಗುರುತಾಗಿ ಕಂಡರೂ ಅದು ಜನರ ಹಕ್ಕಾಗಿ ಉಳಿದಿಲ್ಲ; ಅದು ಅವರಿಗೆ ಬೇಡದ ಹೊರೆ. ತಾವು ಅದಕ್ಕೆ ಹಕ್ಕುದಾರರು ಎಂದು ಅವರು ತಿಳಿದಂತೆ ತೋರುವುದಿಲ್ಲ. ಇದಲ್ಲದೆ ಬದುಕಿನ ದಾರಿಗಳನ್ನು ಕಟ್ಟಿಕೊಳ್ಳಲು ಬೇಕಾದ ಅವಕಾಶಗಳು ಕಡಿಮೆಯಾಗುತ್ತ ಹೋಗುತ್ತಿರುವಾಗ ಜನರಿಗೆ ಈ ನೆಲವೆಂಬುದು ತಾವು ಬೇರು ಬಿಡಬೇಕಾದ ಜಾಗವೆಂದು ಅನಿಸುತ್ತಲೇ ಇಲ್ಲ.
ಒಗ್ಗೂಡಿದ ಕರ್ನಾಟಕ ಮೈದಳೆದಾಗ ಅದೊಂದು ಹರಿದ ಬಟ್ಟೆಯನ್ನು ಹೊಲಿಗೆ ಹಾಕಿ ನಯಗಾರಿಕೆಯಿಂದ ಹೊಸದರಂತೆ ಮಾಡಿರಿಸಿದ್ದಾಗಿತ್ತು. ದಿನಗಳೆಂದಂತೆ ಆಗ ಇದ್ದ ಹರಕಲುಗಳಲ್ಲದೆ ಹೊಸ ಬಿರುಕುಗಳು ಸೀಳುಗಳು ಈಗ ಕಾಣತೊಡಗಿವೆ. ನೆಲ, ನೀರು, ನೆಲದೊಳಗಿನ ಸಂಪತ್ತು, ಬೆಳೆ, ಕುಲಕಸುಬು ಇವು ಯಾವುವೂ ಈಗ ಜನರನ್ನು ಈ ನೆಲಕ್ಕೆ ಕಟ್ಟಿ ಹಾಕುತ್ತಿಲ್ಲ. ಎಲ್ಲವೂ ಅವರಿಂದ ದೂರವಾಗ ತೊಡಗಿವೆ. ಹೊಟ್ಟೆಹೊರೆಯಲು ಇದ್ದ ದಾರಿಗಳು ಬಹುಪಾಲು ಜನರಿಗೆ ಮುಚ್ಚಿಹೋಗಿವೆ.
ಕಳೆದ ಐವತ್ತೈದು ವರುಶಗಳಲ್ಲಿ ಆಡಳಿತವನ್ನು ಬೇರು ಮಟ್ಟಕ್ಕೆ ತರಬೇಕೆಂಬ ಎಲ್ಲ ಯೋಜನೆಗಳೂ ತಲೆಕೆಳಗು ಪರಿಣಾಮವನ್ನು ಉಂಟುಮಾಡಿವೆ. ಅಧಿಕಾರದ ಹಿಡಿತ ಇನ್ನೂ ಬೆಂಗಳೂರು ದೆಹಲಿಗಳಲ್ಲೇ ಉಳಿದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜಾತಿಯ ಸೀಳುಗಳು ಜನರ ಬದುಕನ್ನು ಬರಿದುಗೊಳಿಸುತ್ತ ನಡೆದಿವೆ. ಬಡವರು, ಕೆಳಜಾತಿಯವರು,ಹಿಂದುಳಿದವರು, ಹಿಂದುಗಳು ಎನಿಸಿಕೊಳ್ಳದವರು ಈಗ ಪಡಿಪಾಟಲಿನ ಕಡಲಿನಲ್ಲಿ ಮುಳುಗುತ್ತಿದ್ದಾರೆ. ನಗರಗಳು ಲೂಟಿಕೋರರ ತಾಣಗಳಾಗಿವೆ. ಇಲ್ಲಿ ಅಷ್ಟಿಷ್ಟು ಇದ್ದವರ ಕನಸುಗಳೂ ಸೋಪಿನ ಗುಳ್ಳೆಗಳಂತೆ ಬಣ್ಣತೋರಿ ಮರೆಯಾಗುತ್ತಿವೆ.
ಇದೆಲ್ಲ ಹೀಗೇಕಾಯಿತು? ಇದಕ್ಕೆ ಎರಡು ನೆಲೆಗಳಲ್ಲಿ ಕಾರಣಗಳನ್ನು ಹುಡುಕಬೇಕಾಗುತ್ತದೆ. ಒಂದು ಕರ್ನಾಟಕ ರಾಜ್ಯವೆಂಬುದು ಮೈದಳೆಯುವಾಗಲೇ ಅಡಕವಾಗಿದ್ದು ಆಗ ಕಣ್ಣಿಗೆ ಕಾಣದೆ ಇದ್ದ ಕಾರಣಗಳು. ಇನ್ನೊಂದು ಕಾರಣವೆಂದರೆ ರಾಜ್ಯ ಮೈದಳೆದ ಮೇಲೆ ನಡೆದ ಆಡಳಿತದ ದಿಕ್ಕುದೆಸೆಗಳಿಂದಾಗಿ ರಾಜ್ಯವೆಂಬುದು ಕೇವಲ ನಕಾಶೆಯಾಗಿ ಮಾತ್ರ ಉಳಿಯುವಂತಾದುದು. ಮೊದಲನೆಯದನ್ನು ನೋಡೋಣ. ಕರ್ನಾಟಕ, ಕನ್ನಡ ಮತ್ತು ಕನ್ನಡಿಗರು ಎಂಬ ಮೂರೂ ಎಂದೂ ಮುಪ್ಪುರಿಯಾಗಿ ಹೆಣೆದುಕೊಂಡಿರಲೇ ಇಲ್ಲ. ಹೀಗಾಗಿ ಈ ಮೂರನ್ನೂ ಹೆಣೆಯಲೆಂದೇ ಕಟ್ಟಿದ ಕರ್ನಾಟಕ ತನ್ನ ಒಡಲಿನಲ್ಲೇ ಸೀಳುಗಳನ್ನು ಹೊಂದಿತ್ತು. ಕರ್ನಾಟಕದಲ್ಲಿ ಇದ್ದವರು ಕನ್ನಡಿಗರು ಎಂಬ ಹೇಳಿಕೆಯೀಗ ಹಲವು ನೆಲೆಗಳಲ್ಲಿ ಹುಸಿಯಾಗ ತೊಡಗಿದೆ. ಶಿಕ್ಷಣ, ಉದ್ಯೋಗ, ಉದ್ದಿಮೆಯ ಸವಲತ್ತು ಇವೇ ಮುಂತಾದ ವಲಯಗಳಲ್ಲಿ ಯಾರನ್ನು ಕನ್ನಡಿಗರು ಎಂದು ಕರೆಯ ಬೇಕೆಂಬುದು ಬೇಕಾಬಿಟ್ಟಿಯಾದ ಉತ್ತರಗಳನ್ನು ಪಡೆದುಕೊಂಡಿದೆ. ಅಲ್ಲದೆ ಆ ಉತ್ತರಗಳು ವರುಶಗಳು ಕಳೆದಂತೆ ಬದಲಾಗುತ್ತಲೇ ನಡೆದಿವೆ. ಅಂದರೆ ಮೊದಲಿದ್ದ ಸೀಳುಗಳು ರಾಚುವಂತಾಗಲು ಬಳಿಕ ನಡೆದ ಆಡಳಿತದ ತೀರ್ಮಾನಗಳು ಕಾರಣವಾಗಿವೆ ಎಂದಾಯ್ತು.
ಇನ್ನು ಕನ್ನಡ ಮತ್ತು ಕರ್ನಾಟಕ ಎನ್ನುವುದೂ ಕೂಡ ಬೆಸುಗೆಯನ್ನು ಪಡೆದು ಕೊಂಡಿಲ್ಲ. ದಿನಗಳೆದಂತೆ ಇವೆರಡೂ ಒಂದಕ್ಕೊಂದು ನಂಟಿಲ್ಲದಂತೆ ಸಾಗತೊಡಗಿವೆ. ಕಲಿಕೆ, ಆಡಳಿತ ಮತ್ತು ವಾಣಿಜ್ಯ ವಲಯಗಳಲ್ಲಿ ಕನ್ನಡವೆಂಬುದು ಈಗ ಕೇಳುವರಿಲ್ಲದ ಮಗು. ಕನ್ನಡ-ಇಂಗ್ಲಿಶ್‌ಗಳ ನಂಟು ಈಗ ಎಲ್ಲೆಲ್ಲೋ ಡಿಕ್ಕಿ ಹೊಡೆಯುತ್ತಿದೆ. ಹಳೆಯ ಹೋಲಿಕೆಯನ್ನು ಬಳಸಿ ಹೇಳುವುದಾದರೆ ಈ ಎರಡೂ ನುಡಿಗಳಲ್ಲಿ ಒಂದು ಕಾಲಿಗೆ ಕಟ್ಟಿದ ಗುಂಡು ಹಾಗಾಗಿ ಅದು ತೇಲಲು ಬಿಡುವುದಿಲ್ಲ; ಇನ್ನೊಂದು ನುಡಿ ಸೊಂಟಕ್ಕೆ ಕಟ್ಟಿದ ಬೆಂಡು. ಹಾಗಾಗಿ ಅದು ಮುಳುಗಲು ಬಿಡುವುದಿಲ್ಲ. ಆದರೆ ನೀರಿಗೆ ಬಿದ್ದವರಿಗೆ ಯಾವ ನುಡಿ ಗುಂಡು ಮತ್ತು ಯಾವ ನುಡಿ ಬೆಂಡು ಎಂಬುದು ಬಿಡಿಸಲಾಗದ ಕಗ್ಗಂಟಾಗಿ ತೋರತೊಡಗಿದೆ. ಕನ್ನಡ ಮಾತಾಡುವವರ ರಾಜ್ಯವೆಂಬ ಹೆಸರಿನಲ್ಲಿ ಮೊದಲಾದ ಕರ್ನಾಟಕವೀಗ ಕನ್ನಡದ ಉಸಿರುಗಟ್ಟಿಸುತ್ತಿದೆ. ರಾಜ್ಯಾಡಳಿತವಂತೂ ಇಂಗ್ಲಿಶ್ ತೇಲಿಸುವುದೆಂದೂ ಕನ್ನಡ ಮುಳುಗಿಸುವುದೆಂದು ನಂಬಿದೆ; ಹಾಗೆ ನಂಬಲು ಜನರನ್ನು ಒತ್ತಾಯಿಸುತ್ತಿದೆ.
ಈ ನೆಲೆಯಲ್ಲೇ ಕನ್ನಡ ಮತ್ತು ಕನ್ನಡಿಗರು ಎಂಬ ಎಳೆಗಳ ನಡುವೆ ಉಂಟಾಗಿರುವ ಸೀಳನ್ನು ನೋಡಬಹುದು. ಒಂದೇ ನುಡಿಯನ್ನು ಬಲ್ಲವರು ಮತ್ತು ಅದು ಕನ್ನಡ ಮಾತ್ರ ಆಗಿರುವವರು ಕನ್ನಡಿಗರು ಎಂದು ಕರೆದರೆ ಆಗ ಕನ್ನಡಿಗರೆಂಬುವವರೇ ಕಡಿಮೆಯಾಗುತ್ತ ನಡೆದಿದ್ದಾರೆ. ವಯಸ್ಸಾದವರು, ಊರೂರು ಸುತ್ತಲಾರದ ಇಲ್ಲವೇ ದುಡಿಮೆಯಲ್ಲಿ ತೊಡಗಿಸಿಕೊಳ್ಳಲಾಗದ ಹೆಂಗಸು ಮಾತ್ರವೇ ಕನ್ನಡಿಗರೆನಿಸಿಕೊಳ್ಳ ಬಲ್ಲರು. ಹಾಗಾಗಿ ಈ ಎರಡು ಎಳೆಗಳು ಈಗ ಹೆಣೆದುಕೊಳ್ಳಲಾರವು.
ಕಳೆದ ಐವತ್ತೈದು ವರುಶಗಳು ರಾಜ್ಯವೆಂಬುದು ಜನರನ್ನು ಕಾಯುವ ,ಅವರ ಬೇಕುಬೇಡಗಳಿಗೆ ಮಿಡಿಯುವ ನೆಲೆ ಎಂಬುದು ಹುಸಿ ಎಂಬುದನ್ನು ತೋರಿಸಕೊಟ್ಟಿವೆ. ಏಕೆಂದರೆ ರಾಜ್ಯವೆಂಬ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ನಾವು ಕಟ್ಟಿಕೊಂಡಿರುವ ನೆಲೆಗಳು ಜನರ ದುಡಿಮೆಯ ಬಹುಪಾಲನ್ನು ನುಂಗಿ ಹಾಕುತ್ತಿವೆ; ಆದರೆ ಅದರಿಂದ ಜನರಿಗೆ ಏನೇನೂ ನೆರವು ದೊರೆಯುತ್ತಿಲ್ಲ. ಜನರಲ್ಲಿ ನಾಡಿನ ಹಿರಿಮೆಯ ಬಗೆಗೆ ಹೆಮ್ಮೆಯನ್ನು ಮೂಡಿಸಲು ಏನೆಲ್ಲ ಕಸರತ್ತುಗಳನ್ನು ಉತ್ಸವ,ಪ್ರಶಸ್ತಿ, ಆಚರಣೆಗಳ ಮೂಲಕ ಯತ್ನಿಸಿದರೂ ಅದೆಲ್ಲವೂ ಕೆಲಸಕ್ಕೆ ಬರುತ್ತಿಲ್ಲ. ಸಮ್ಮೇಳನಗಳಿಗೆ, ಉತ್ಸವಗಳಿಗೆ ಜನರು ಮುಗಿಬಿದ್ದು ಬರುವುದನ್ನು ಬಣ್ಣಿಸುತ್ತ ಇದೆಲ್ಲವೂ ನಾಡಿನ ಬಗೆಗೆ ಜನರಲ್ಲಿ ಹೆಮ್ಮೆ ಮೂಡುತ್ತಿದೆ ಎಂಬುದರ ಸೂಚನೆ ಎಂದು ನಂಬಿಸಲು ತೊಡಗಿದ್ದರೂ ದಿಟ ಬೇರೆಯೇ ಆಗಿದೆ. ಜನರು ಏಕೆ ಎಲ್ಲಿಗಾದರೂ ಮುನ್ನುಗುತ್ತಾರೆ ಎಂಬುದಕ್ಕೆ ಬೇರೆಯೇ ವಿವರಣೆ ಬೇಕಿದೆ. ಅದು ಹೆಮ್ಮೆಯ ಗುರುತಂತೂ ಅಲ್ಲ.
ಮತ್ತೆ ಮೊದಲ ಮಾತಿಗೆ ಬರೋಣ.ಬೆಳೆ ನೀಡುವ ಜಮೀನು, ಕಾಡುಗಳು, ಹರಿಯುವ ನೀರು, ತಲಾತಲಾಂತರದಿಂದ ಬಂದ ಕಸುಬುಗಳು ಈಗ ಜನರ ಹಕ್ಕಾಗಿ ಉಳಿದಿಲ್ಲ. ಜನರ ಒಳಿತು ಎಂದರೆ ಅವರ ಅಂದಂದಿನ ಹೊಟ್ಟೆಯ ಬೇಡಿಕೆಗಳನ್ನು ಪೂರೈಸುವುದು ಎಂದು ತಿಳಿದಿರುವುದರಿಂದ ಅದಕ್ಕೆ ಬೇಕಾದಂತೆ ಎಲ್ಲವೂ ಅಣಿಗೊಳ್ಳುತ್ತಿವೆ. ಆದರೆ ಜನರು ಸಮುದಾಯವಾಗಿ, ಪೌರ ಸಮಾಜವಾಗಿ ಬೆಳೆಯುವುದಾದರೆ ಆಗ ಆಯಾ ಹೊತ್ತಿನ ಬೇಡಿಕೆಗಳು ಈಡೇರಿದರೆ ಸಾಲದು. ಅದನ್ನು ಮೀರಿದ ನಾಳೆಗಳ ಕನಸನ್ನು, ಹೊಣೆಯನ್ನು ಮತ್ತು ಹಕ್ಕುಗಳನ್ನು ಹುಟ್ಟಿಹಾಕಬೇಕಾಗುತ್ತದೆ. ಆದರೆ ಈ ದಿಕ್ಕಿನಲ್ಲಿ ಏನೂ ನಡೆಯುತ್ತಿಲ್ಲ. ಹಾಗಾಗಿ ಇದೆಲ್ಲವೂ ದಾರವಿಲ್ಲದ ಸೂಜಿಯಿಂದ ಮಾಡಿದ ಹೊಲಿಗೆಯಂತಾಗಿದೆ.
ಇಪ್ಪತ್ತೊಂದನೆಯ ಶತಮಾನ ಬಯಸುವ ನೆಲೆಗಳಲ್ಲಿ ರಾಜ್ಯಗಳಿಗೆ ಜಾಗ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಒಂದು ವೇಳೆ ಜಾಗ ಇದ್ದರೂ ಅದು ಈಗಿರುವ ಮಾದರಿಯಲ್ಲಿ ಇರಲಾರದು. ಅದರ ಚಹರೆಗಳನ್ನು ಹುಡಕಬೇಕಿದೆ. ಅದಕ್ಕೆ ತಕ್ಕಂತೆ ಮುಂದಿನ ಹೆಜ್ಜೆ ಇಡಬೇಕಾಗಿದೆ. ಅಲ್ಲಿಯವರೆಗೆ ರಾಜ್ಯವೆಂಬುದು ಜನರ ಬೆನ್ನಿನ ಹೊರೆಯೇ ಹೊರತು ಅವರ ಬದುಕನ್ನು ನಿರಾಳಗೊಳಿಸುವ ದಿಟವಂತೂ ಅಲ್ಲ. ಈಗ ನಾಡಗೀತೆಯನ್ನು ಹಾಡುವಾಗ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಬೇಕೆಂದು ಹೇಳುತ್ತಿದ್ದಾರಷ್ಟೆ. ಆಲಾಪ, ಸ್ವರ ಜೋಡಣೆಯಲ್ಲಿ ಆ ಹಾಡು ಮುಗಿಯುವ ವೇಳೆಗೆ ನಿಂತವರು ಚಡಪಡಿಕೆಗೆ ಒಳಗಾಗುವುದನ್ನು ನೋಡುತ್ತಿದ್ದೇವೆ. ಇದನ್ನೇ ಮಾದರಿ ಎನ್ನುವುದಾದರೆ ಮುಂಬರುವ ದಿನಗಳಲ್ಲಿ ಕರ್ನಾಟಕವೆಂಬ ರಾಜ್ಯ ವ್ಯವಸ್ಥೆಯು ಹೀಗೆ ಮುಂದುವರೆದರೆ ಅದು ಒಂದು ದೊಡ್ಡ ಆಕಳಿಕೆಯಂತೆ ತೋರಿದರೆ ಅಚ್ಚರಿ ಪಡಬೇಕಾಗಿಲ್ಲ.

ಬುಧವಾರ, ನವೆಂಬರ್ 16, 2011

ಕನ್ನಡ ಕ್ಲಾಸಿಕಲ್ ನುಡಿಯಾಯಿತು: ಮುಂದೇನು?


೧. ಕ್ಲಾಸಿಕಲ್ ಎಂಬ ಗುರುತು ಕನ್ನಡಕ್ಕೆ ಬೇಕೋ ಬೇಡವೋ ಎಂಬ ಚರ್ಚೆಗೆ ಈಗ ಚಲಾವಣೆ ಇಲ್ಲವಾಗಿದೆ. ಈ ಗುರುತನ್ನು ಪಡೆದುಕೊಂಡ ಮೇಲೆ ನುಡಿಯ ಬೆಳವಣಿಗೆಗೆ ಏನು ಮಾಡಬೇಕು ಎಂಬದನ್ನು ಕಂಡುಕೊಳ್ಳಬೇಕಾಗಿದೆ.ಮೊದಲಿಗೆ ಕ್ಲಾಸಿಕಲ್ ಎಂಬ ಪದಕ್ಕೆ ಶಾಸ್ತ್ರೀಯ ಎಂದು ಕರೆಯುವುದನ್ನು ನಿಲ್ಲಿಸಬೇಕಾಗಿದೆ. ಕೇಂದ್ರ ಸರ್ಕಾರ ಕ್ಲಾಸಿಕಲ್ ನುಡಿಗಳನ್ನು ಗುರುತಿಸುವ ಆದೇಶವನ್ನು ಹೊರಡಿಸಿದಾಗ ಆ ಆದೇಶದ ಹಿಂದಿ ಆವೃತ್ತಿಯಲ್ಲಿ ಕ್ಲಾಸಿಕಲ್ ಎಂಬುದಕ್ಕೆ ಶಾಸ್ತ್ರೀಯ ಎಂಬ ಪದವನ್ನು ಬಳಸಿದೆ.ನಾವು ಅದನ್ನೇ ಹೊತ್ತು ಮೆರೆಯುತ್ತಿದ್ದೇವೆ. ತಮಿಳು ನುಡಿಯು ಕ್ಲಾಸಿಕಲ್ ಎಂಬುದಕ್ಕೆ ಚೆಮ್ಮೊಳಿ( ಕನ್ನಡ ಬರೆಹದಲ್ಲಿ ಹೀಗೆ ಬರೆಯಬಹುದು.ನುಡಿಯುವ ಬಗೆ ಬೇರೆ)ಎಂದೂ ತೆಲುಗು ನುಡಿಯು ಪ್ರಾಚೀನ ಎಂದು ಕರೆದುಕೊಂಡಿವೆ. ಸಂಸಕ್‌ಋತ,ಲ್ಯಾಟಿನ್, ಹೈ ಅರಾಬಿಕ್,ಲ್ಯಾಟಿನ್ ನುಡಿಗಳನ್ನು ಕ್ಲಾಸಿಕಲ್ ನುಡಿಗಳೆಂದು ಗುರುತಿಸುತ್ತಿರುವ ಬಗೆಗೂ ಕನ್ನಡವನ್ನು ಕ್ಲಾಸಿಕಲ್ ಎಂಬು ಗುರುತಿಸುತ್ತಿರುವು ಬಗೆಗೂ ಬದಲಾವಣೆ ಇರುವುದರಿಂದ ನಾವು ಈಗಲೂ ಬೇರೆಯ ಪದವನ್ನು ಬಳಸುವುದು ಸರಿಯಾದೀತು.
೨. ಈಗ ಕರ್ನಾಟಕ ಸರ್ಕಾರ ಮತ್ತು ನುಡಿಜಾಣರು ಕ್ಲಾಸಿಕಲ್ ಕನ್ನಡವೆಂದರೆ ಕ್ರಿ.ಶ.೧೭೫೦ ರ ವರೆಗೆ ಬರೆಹಗಳಲ್ಲಿ ಕಾಣಸಿಗುವ ಕನ್ನಡವೆಂದು ಮನ್ನಣೆ ಮಾಡುವ ನಿಲುವನ್ನು ತಾಳಿದಂತಿದೆ. ಇದು ಎಲ್ಲೂ ದಾಖಲಾಗಿಲ್ಲವಾದರೂ ಕೇಂದ್ರ ಸರ್ಕಾರಗಳ ಮತ್ತು ರಾಜ್ಯ ಸರ್ಕಾರಗಳ ನಡುವೆ ನಡೆಯುತ್ತಿರುವ ಕಾಗದಪತ್ರ ವ್ಯವಹಾರಗಳಲ್ಲಿ ಈ ನಿಲುವನ್ನು ಒಪ್ಪಿರುವ ಸೂಚನೆಗಳು ಸಿಗುತ್ತಿವೆ. ಈಗ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯು ಕ್ಲಾಸಿಕಲ್ ಕನ್ನಡದ ಬೆಳವಣಿಗೆಗೆ,ಅಧ್ಯಯನಕ್ಕೆ ಬೇಕಾದ ಯೋಜನೆಗಳನ್ನು ರೂಪಿಸುವ ಕೆಲಸವನ್ನು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಗೆ ವಹಿಸಿದೆಯಷ್ಟೆ.( ತೆಲುಗಿಗೆ ಸಂಬಂಧಿಸಿದ ಕೆಲಸವನ್ನೂ ಇದೇ ಸಂಸ್ಥೆ ನಿರ್ವಹಿಸಬೇಕಿದೆ) ಈ ಸಂಸ್ಥೆಯು ಕ್ರಿ.ಶ.೧೭೫೦ ರ ವರೆಗಿನ ಬರೆವಣಿಗೆಯಲ್ಲಿ ಕಂಡುಬರುವ ಕನ್ನಡವನ್ನೇ ಕ್ಲಾಸಿಕಲ್ ಕನ್ನಡವೆಂದು ಒಪ್ಪುವ ಹಾದಿಯಲ್ಲಿರುವಂತಿದೆ. ಈ ನಿಲುವನ್ನು ಮರಳಿ ಪರಿಶೀಲಿಸಬೇಕಿದೆ.
೩. ಎಲ್ಲಕ್ಕಿಂತ ಮೊದಲು ಕನ್ನಡವೆಂದರೆ ಬರೆವಣಿಗೆ,ಅದರಲ್ಲೂ ಸಾಹಿತ್ಯ ಕೃತಿಗಳು ಎಂದು ತಿಳಿಯುವ ನೆಲೆಯಿಂದ ಹೊರಬರಬೇಕು. ಕನ್ನಡದ ಹೆಮ್ಮೆಯ ಗುರುತಾಗಿ ಪಂಪನನ್ನೋ, ಕುಮಾರವ್ಯಾಸನನ್ನೋ, ಹರಿಹರನನ್ನೋ ಬೆರಳು ಮಾಡಿ ತೋರಿಸುವುದಲ್ಲಿ ಮುಳುಗಿಹೋಗಿರುವ ನಾವು ಈ ಚೌಕಟ್ಟಿನಿಂದ ಹೊರಬೀಳಬೇಕು. ಕನ್ನಡವೆಂದರೆ ಜನರಾಡುವ ನುಡಿ ಮತ್ತು ಆ ನುಡಿಯಲ್ಲಿ ಹುದುಗಿರುವ ಬದುಲಿನ ಬಗೆ. ಈ ಕನ್ನಡದ ಒಳನುಡಿಗಳಲ್ಲಿಹೊರಗೆ ಕಾಣದಿರುವ ನೆನಪುಗಳಿವೆ. ಅದೆಲ್ಲವೂ ಕನ್ನಡ ಮತ್ತು ಅದೇ ಕನ್ನಡ ಎನ್ನುವುದನ್ನು ಮರಳಿ ನೆನಪು ಮಾಡಿಕೊಳ್ಳಬೇಕು. ಬರೆಹ ಮತ್ತು ಸಾಹಿತ್ಯಕ್ಕೆ ಒತ್ತನ್ನು ನೀಡುವುದಾದರೆ ಆಗ ಮಾತಿನಲ್ಲಿ ಅಡಗಿರುವ ತಿಳುವಳಿಕೆಯನ್ನೆಲ್ಲ ಅನುಬಂಧವಾಗಿ ನೋಡುವ ಇಂದಿನ ಮಾದರಿಯೇ ಮುಂದೆಯೂ ನೆಲೆ ನಿಂತರೆ ಅಚ್ಚರಿಯೇನಲ್ಲ..
೪. ಏನೇ ಮಾಡಲಿ. ಆದು ಈವರೆಗೆ ನಡೆದಿರುವ ಓದಿನ ಚೌಕಟ್ಟನ್ನು ಬೆಳೆಸುವಂತಿರಬೇಕು. ಕನ್ನಡದಲ್ಲಿ ಹೇಳಿದ್ದನೇ ಹೇಳುವ ಬರೆದದ್ದನ್ನೇ ಬರೆಯುವ ಸವೆಕಲು ಹಾದಿ ಎಲ್ಲರ ಮನ್ನಣೆಯನ್ನು ಪಡೆದುಕೊಂಡುಬಿಟ್ಟಿದೆ. ಒಮ್ಮೆ ಮನ್ನಣೆ ದೊರಕಿದ ಬರೆಹಗಳು ಮತ್ತೆಮತ್ತೆ ಕಲಿಕೆಯ ಚೌಕಟ್ಟಿನೊಳಗೆ ನೆಲೆನಿಂತು ಹೊಸ ಚಿಂತನೆಗಳು ನುಗ್ಗದಂತೆ ನೋಡಿಕೊಳ್ಳುವುದು ಇಂದಿಗೂ ಮುಂದುವರೆದಿದೆ. ಒಂದು ಉದಾಹರಣೆಯನ್ನು ನೋಡಿ. ೧೯೨೮ರ ಸುಮಾರಿಗೆ ಹೊರಬಂದ ಮೈಸೂರು ವಿಶ್ವವಿದ್ಯಾಲಯದ ’ಕನ್ನಡ ಕೈಪಿಡಿ’ ಆಗ ಒಂದು ಬಲವಾದ ಆಕರಗ್ರಂಥವಾಗಿತ್ತು ತೊಂಬತ್ತು ವರ್ಷಗಳು ಕಳೆದರೂ ಅಲ್ಲಿಂದ ಮುಂದೆ ನುಡಿಯ ಚರಿತ್ರೆ,ಸೊಲ್ಲರಿಮೆ,ಛಂದಸ್ಸು ಇವೆಲ್ಲ ವಲಯಗಳಲ್ಲಿ ನಮ್ಮ ಅರಿವು ಹೆಚ್ಚಾಗಿದ್ದರೂ ಆ ಗ್ರಂಥದ ಚೌಕಟ್ಟಿನಿಂದ ನಮ್ಮ ವಿದ್ಯಾರ್ಥಿಗಳು ಹೊರಬಂದಿಲ್ಲ. ಆ ಹೊತ್ತಗೆಯನ್ನು ಮರಳಿ ಇಂದಿನ ತಿಳುವಳಿಕೆಯ ನೆಲೆಯಲ್ಲಿ ಮರಳಿ ಕಟ್ಟುವ ಕಡೆಗೂ ನಮ್ಮ ಬಲ್ಲವರು ಚಿಂತಿಸಿಲ್ಲ. ಕ್ಲಾಸಿಕಲ್ ಕನ್ನಡ ಅಧ್ಯಯನ ಇದೇ ಹಾದಿಯನ್ನು ಹಿಡಿಯಬಾರದು.
೫. ಈವರೆಗೆ ಕನ್ನಡ ತಿಳುವಳಿಕೆಯನ್ನು ಅರಿಯಲು ನಡೆಸಿಎಉವ ಎಲ್ಲ ಅಧ್ಯಯನಗಳನ್ನು ಒತ್ತಟ್ಟಿಗಿಟ್ಟು ನೋಡುವ ಕೆಲಸ ಮೊದಲಾಗಬೇಕು. ಯಾರು ಎಲ್ಲಿ ಏನೆಲ್ಲ ಕೆಲಸಗಳನ್ನು ಮಾಡಿದ್ದಾರೆ ಎಮಬುದನ್ನು ತಿಳಿಸಿಕೊಡುವ ಯಾವ ಆಕರಕೇಂದ್ರವೂ ಈಗ ಇಲ್ಲ. ಎಲ್ಲವೂ ಚದುರಿ ಹೋಗಿದೆ. ಎಷ್ಟೋ ಅಧ್ಯಯನಗಳ ಮಾಹಿತಿ ಮಾತ್ರ ನಮಗೆ ದೊರಕುತ್ತಿದೆ. ಆ ಅಧ್ಯಯನಗಳನ್ನು ನೋಡುವುದು ಕೂಡ ಈಗ ಆಗುತ್ತಿಲ್ಲ. ಇವೆಲ್ಲವನ್ನೂ ಒಂದೆಡೆಗೆ ಕೂಡಿಸಿ ವಿಂಗಡಿಸಿ ಕೊಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಯೋಜನೆಯೊಂದನ್ನು ರೂಪಿಸಬೇಕು. ಈಗ ಕೇವಲ ಹೊತ್ತಗೆಗಳನ್ನು ಕೂಡಿಸುವ ಕೆಲಸವಲ್ಲ; ಚದುರಿ ಹೋಗಿರುವ ಸಾವಿರಾರು ದಾಖಲೆಗಳನ್ನು ಒಂದಡೆಗೆ ತರುವ ಕೆಲಸ. ಸಾಂಸ್ಥಿಕವಾಗಿಯೇ ಇದು ನಡೆಯ ಬೇಕಿದೆ. ಇದು ಮೊದಲಾಗಬೇಕು.
೬. ಕನ್ನಡ ನಾಡಿನ ಜಾಣರು ಯಾವ ಬಗೆಯ ಅಧ್ಯಯನಗಳು ನಡೆಯ ಬೇಕು,ಹೇಗೆ ನಡೆಯಬೇಕು ಎಂಬುದನ್ನು ವಿವರಿಸುವ ಕೆಲಸವನ್ನು ಮಾಡಬೇಕಿದೆ. ಇದರಿಂದ ಮುಂದಿನ ತಲೆಮಾರು ಈ ಅಧ್ಯಯನಗಳನ್ನು ಕೈಗೊಂಡು ಮುನ್ನಡೆಯಲು ನೆರವಾಗುತ್ತದೆ. ಇದಕ್ಕಾಗಿ ಹಲವು ಬಗೆಯ ತರಬೇತಿಗಳನ್ನು ನೀಡಬೇಕಾಗಿ ಬರಬಹುದು. ಹೀಗೆ ತರಬೇತಿ ನೀಡುವಾಗ ಅಧ್ಯಯನದ ಗುರಿ ಮತ್ತು ಹಾದಿಗಳನ್ನು ತೋರಿಸುವ ಬಗೆ ಬದಲಾಗಬೇಕು. ನಮಗೆ ಯವುದು ಮುಖ್ಯವೋ ಅದೇ ಜನರಿಗೂ ಮುಖ್ಯ ಎಂಬ ಹಟವನ್ನು ನುಡಿಜಾಣರು ಕೈಬಿಡಬೇಕು. ಆನರಿ ಒಳಿತಿಗೆ ಏಣಾಗ ಬೇಕು ಎಂಬುದನ್ನು ಕಣ್ಣೆದುರಿಗೆ ಇರಿಸಿಕೊಳ್ಳದ ಮತ್ತು ಅವರ ಬದುಕಿನ ಹಾದಿಯನ್ನು ಒಳಗೊಳ್ಳದ ಇಂದಿನ ಎಷ್ಟೋ ಹಾದಿಗಳನ್ನು ನಾವು ಕೈಬಿಡಬೇಕಾಗಿದೆ.
೭. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದ ಹಲವಾರು ಆದ್ಯಯನಗಳು ಕನ್ನಡ ಬದುಕನ್ನೇ ಕುರಿತಾಗಿದ್ದರೂ ಅವೆಲ್ಲವೂ ಕನ್ನಡ ನುಡಿಯಲ್ಲಿ ಇಲ್ಲ. ಇಂಗ್ಲಿಶ್ ಮೊದಲಾಗಿ ಕೆಲವು ಯೂರೋಪಿನ ನುಡಿಗಳಲ್ಲಿವೆ. ಅವೆಲ್ಲವನ್ನು ಮತ್ತೊಮ್ಮೆ ಪರಿಶೀಲಿಸುವ ಕೆಲವನ್ನು ಕೈಗೊಳ್ಳಬೇಕು. ಈಗಲೂ ಕನ್ನಡ ಬದುಕನ್ನು ನೋಡುವ ನೂರಾರು ಅಧ್ಯಯನಗಳು ಕನ್ನಡ ನುಡಿಯಲ್ಲಿ ನಡೆಯುತ್ತಿಲ್ಲ. ಬೇರೆ ಬೇರೆ ನಾಡುಗಳ ಅಧ್ಯಯನಕಾರರು ಇಂಗ್ಲಿಶಿನಲ್ಲಿ ತಮ್ಮ ತಿಳುವಳಿಕೆಗಳನ್ನು ಮಂಡಿಸುತ್ತಿದ್ದಾರೆ. ಈ ತಿಳುವಳಿಕೆಗಳು ಕನ್ನಡದ ಓದಿನ ಭಾಗವಾಗಿ ಬದಲಾಗುತ್ತಿಲ್ಲ. ಹಾಗಾದಾಗ ಮತ್ರ ಅಂತಹ ಓದಿನ ಹೆಚ್ಚಳ ಮತ್ತು ಕೊರತೆಗಳು ಕಾಣ ತೊಡಗುತ್ತವೆ. ಒಂದು ನಿದರ್ಶನವನ್ನು ನೋಡೋಣ. ತೀರಾ ಈಚೆಗೆ ಅಮೆರಿಕದ ವಿದ್ವಾಂಸ ಫ್ರಾಂಕ್ಲಿನ್ ಸೌತ್ವರ್ತ್ ’ಲಿಂಗ್ವಿಸ್ಟಿಕ್ ಅಂತ್ರಪಾಲಜಿ ಆಫ್ ಸೌತ್ ಏಸಿಯಾ’ ಎಂಬ ತಮ್ಮ ಅಧ್ಯಯನ ಕೃತಿಯನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಅವರು ಕನ್ನಡದ ಮಾಹಿತಿಯನ್ನು ಬಳಸಿಕೊಂಡಿರುವುದು ತುಂಬಾ ಕಡಿಮೆ. ಅದರಲ್ಲೂ ಇಂಗ್ಲಿಶ್ ನುಡಿಯಲ್ಲಿ ದೊರಕುವ ಕನ್ನಡ ನುಡಿಯ ಮಾಹಿತಿಯನ್ನು ಮಾತ್ರ ಬಳಸಿಕೊಂಡಿದ್ದಾರೆ. ಕಿಟೆಲ್ ನಿಘಂಟು ಅವರಿಗೆ ಆಕರ ವಾಗುತ್ತದೆಯೇ ಹೊರತು, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟು ಅಲ್ಲ. ಹೀಗಾಗಿ ಆ ಅಧ್ಯಯನಕ್ಕೆ ಮಿತಿಗಳು ಒದಗಿವೆ. ಇದನ್ನು ನಿವಾರಿಸುವುದು ಹೇಗೆ? ಕನ್ನಡದ ಮಾಹಿತಿಯನ್ನು ಇಂಗ್ಲಿಶಿನಲ್ಲಿ ಒದಗಿಸುವ ವ್ಯವಸ್ಥೆಯನ್ನು ಮಾಡುವುದು ಒಂದು ದಾರಿಯಾಗಿ ಕಾಣುತ್ತದೆ. ಆದರೆ ಅದು ಸರಿಯಾದ ಹಾದಿಯಲ್ಲ. ಬದಲಿಗೆ ಇಂತಹ ಅಧ್ಯಯನಗಳನ್ನು ಕನ್ನಡದ ಮಾಹಿತಿಯ ಬೆಳಕಿನಲ್ಲಿ ಮರು ಪರಿಶೀಲನೆಗೆ ಗುರಿಪಡಿಸುವ ಕೆಲಸವನ್ನು ಕೈಗೊಳ್ಳುವುದು ಸರಿಯಾದ ಹಾದಿ ಯಾದೀತು. ಈ ಬಗೆಯ ಕೆಲಸಗಳು ಮೊದಲಾಗಬೇಕಿದೆ.
೮. ಎಲ್ಲವನ್ನೂ ಈ ಟಿಪ್ಪಣಿಯಲ್ಲಿ ಪಟ್ಟಿ ಮಾಡಲು ಆಗುವುದಿಲ್ಲ. ಕನ್ನಡ ನುಡಿಯು ಕನ್ನಡ ಬದುಕಿಗೆ ಸೇರಿದ್ದೆಂದು ತಿಳಿದು ನಮ್ಮ ಅಧ್ಯಯನಗಳನ್ನು ನಡೆಸುವ ಮೂಲಕ ಕ್ಲಾಸಿಕಲ್ ಕನ್ನಡವೆಂದರೆ ಅಲ್ಲೋ ಕೆಲವು ಬರೆಹಗಳ ದಾಖಲೆಗಳನ್ನು ಮತ್ತೆಮತ್ತೆ ಹಿಂಜುತ್ತ ಕೂರುವ ಕೆಲಸಗೇಡಿತನದಿಂದ ಹೊರಬರಬಹುದು. ದಿಟಬಾಗಿ ಬಾಯ್‌ಎರೆಯ ಕನ್ನಡಕ್ಕೆ ತಕ್ಕ ಮನ್ನಣೆಯನ್ನು ದೊರಕಿಸಲು ಆಗ ಅನುವಾದೀತು.

ಮಂಗಳವಾರ, ನವೆಂಬರ್ 15, 2011

ಒಂದು ಪ್ರತಿಕ್ರಿಯೆ

ನಿಮ್ಮ ಅಂಕಣ ಬರಹವನ್ನು ಓದಿದೆ. ಮೊದಲ ಓದಿಗೆ ಅಲ್ಲಿನ ವಿವರಗಳು ನಿಮ್ಮ ಮಾತಿಗೆ ಒಪ್ಪಿಗೆ ನೀಡಲು ಒತ್ತಾಯಿಸುತ್ತವೆ. ಈಚೆಗೆ ಕನ್ನಡದಲ್ಲಿ ನಡೆಯುತ್ತಿರುವ ಚರ್ಚೆಯ ಜತೆ ಹೆಜ್ಜೆ ಹಾಕುವ ನಿಮ್ಮ ಈ ಬರಹವನ್ನು ಓದಿದ ಮೇಲೆ ಅನಿಸಿದ ಕೆಲವು ಮಾತುಗಳನ್ನು ಇಲ್ಲಿ ಬರೆದಿದ್ದೇನೆ.

ಕನ್ನಡವೆಂಬುದು ಕನ್ನಡತನ ಎಂಬುದು ತಿರುಳೆಂದು ಏಕೆ ತಿಳಿಯಬೇಕು? ಅದು ಬಗೆ, ಇಲ್ಲವೇ ಬಗೆಯುವ ಪರಿ. ಹಾಗಾಗಿ ನೀರುಳ್ಳಿಯನ್ನು ಸುಲಿಯುತ್ತ ಹೋದಂತೆ ಏನೂ ಉಳಿಯುವುದಿಲ್ಲ ಎಂಬುದು ಹೇಗೋ ಹಾಗೇ ಕನ್ನಡ ಬದುಕಿನಲ್ಲಿ ’ಅನ್ಯ’ವಾದುದನ್ನು ಹೊರಗಿಡುತ್ತ ಹೋದಂತೆ ಏನೂ ಉಳಿಯುವುದಿಲ್ಲ ಎನ್ನುವ ನಿಮ್ಮ ಅನಿಸಿಕೆ ಕನ್ನಡವೆಂಬ ತಿರುಳನ್ನು ಹುಡುಕುವವರಿಗೆ ದಿಟವೆಂದು ತೋರಬಹುದು. ಆದರೆ ನೀರುಳ್ಳಿ ಸುಲಿಯುವಾಗ ಬರುವ ಕಂಪು ಮತ್ತು ಕಣ್ಣೀರು ದಿಟವಲ್ಲವೇ?ಅದೆ ಅದರ ಬಗೆಯಲ್ಲವೇ?

ಒಂದು ವೇಳೆ ಕನ್ನಡ ಬದುಕು ಹೊರಗಿನಿಂದ( ಹಾಗೆಂದು ತಿಳಿಯೋಣ) ಬಂದುದರಿಂದಲೇ ಕಟ್ಟಿದ್ದು ಎಂದು ತಿಳಿಯುವುದಾದರೆ ನನಗೆ ಅಂತಹ ಕನ್ನಡ ಬದುಕು ಕಾನೂರು ಹೆಗ್ಗಡತಿಯ ವಾಸುವಿನ ಚೀಲದಂತೆ ತೋರುತ್ತದೆ. ಅಲ್ಲಿ ಹತ್ತಾರು ಕೂಡಿ ಹಾಕಿದ ಸರಕುಗಳಿವೆ. ಗೋಲಿ,ಗಜ್ಜುಗ,ಹಣ್ಣು,ಹಕ್ಕಿ ಗರಿ,ಬಳಪ,ಪೆನ್ಸಿಲ್,ಚಾಟರ್ ಬಿಲ್ಲು ಹೀಗೆ ಒಂದರೊಡನೊಂದು ಸೇರದ,ಬೆರೆಯದ ಸರಕುಗಳು ಅವು.ಮಾಸಿವೆ,ಹಳತಾಗಿವೆ. ಕನ್ನಡ ಬದುಕು ಹೀಗೆ ಇದೆಯೆಂದು ತಿಳಿಯೋಣವೇ? ಪಡೆದದ್ದನ್ನು ತನ್ನದನ್ನಾಗಿ ಮಾಡಿಕೊಳ್ಳುವ ಬಗೆಯೊಂದು ಇದೆಯಲ್ಲವೇ? ಹಾಗಿಲ್ಲದೇ ಇದ್ದಲ್ಲಿ ’ಅನ್ಯ’ವನ್ನು ಪಡೆದ ಎಲ್ಲ ಬದುಕುಗಳು ಈ ನಾಡಿನಲ್ಲಿ ಒಂದೇ ಬಗೆಯಲ್ಲಿ ಇರಬೇಕಿತ್ತು. ಅಲ್ಲದೆ ಪಡೆದು ಕೊಂಡದ್ದ ಇಡಿಯಾಗಿ ಕನ್ನಡ ಬದುಕಿನೊಳಗೆ ಇಳಿದಿದೆಯೇ? ಹಾಗಿಲ್ಲದಿದ್ದಲ್ಲಿ ಬಂದದ್ದು ಹರಡುವ ಬಗೆಯನ್ನು ಯಾರು ,ಹೇಗೆ ಕಟ್ಟಿಹಾಕಿದರು? ಇದೆಲ್ಲವನ್ನೂ ನೋಡಬೇಕಲ್ಲವೇ?

ದೇಡಿ ಎಂಬುದು ಕೆಲವೊಮ್ಮೆ ತಿರುಳು ಎಂಬ ನೆಲೆಯಲ್ಲಿ ಬಳಕೆಯಾಗುತ್ತದೆ. ಅದನ್ನು ನಾವು ಯಾವಾಗಲೂ ’ಅಲ್ಲದ್ದು’ ಎಂಬ ನೆಲೆಯಲ್ಲೇ ಕಟ್ಟಿಕೊಂಡಿದ್ದೇವೆ. ಮಾರ್ಗವಲ್ಲದ್ದು ದೇಸಿ ಎನ್ನುತ್ತೇವೆ. ಮಾರ್ಗದ ಚೌಕಟ್ಟಿಗೆ ಸಿಗದುದು ದೇಸಿ ಎನಿಸಿ ಬಿಡುತ್ತದೆ. ಆದರೆ ದೇಸಿ ಎನ್ನುವುದನ್ನು ನಾವು ಇನ್ನೂ ಬಗೆವ ಪರಿ ಎಂಬಂತೆ ನೋಡೇ ಇಲ್ಲ. ದೇಸಿ ಎಂಬ ತಿರುಳನ್ನು ಹುಡುಕಲು ಹೊರಟರೆ ಕೊನೆಗೆ ಏನೂ ದೊರೆಯದೇ ಹೋಗಬಹುದು. ಆದರೆ ಕನ್ನಡದ ನೆಲೆಯನ್ನು,ಕನ್ನಡ ಬದುಕಿನ ಬಗೆವ ಪರಿಯನ್ನು ಹುಡುಕದೇ ಬೇರೆ ದಾರಿಯೇ ಇಲ್ಲ.ತಿಳಿ ಕದಡುವುದೆಂದು ಕೊಳವನ್ನು ಕಲಕದೇ ಇರುವುದು ಹೇಗೆ? ಕೊಳವನ್ನು ಕಲಕದೇ ಹಕ್ಕಿಗಳಿಗೆ ಬೇರೆ ದಾರಿಯೇ ಇಲ್ಲ.