ಗುರುವಾರ, ನವೆಂಬರ್ 24, 2011

ಬೇರೆ ನಾಡುಗಳಲ್ಲಿ ಕನ್ನಡದ ಸಸಿಗಳನ್ನು ನೆಡುವುದೀಗ ಆಗಬೇಕಿದೆಯೇ?


ಕನ್ನಡ ನುಡಿ, ಬದುಕು ಬರಹಗಳನ್ನು ಬೇರೆ ನುಡಿಯವರಿಗೆ ಕಲಿಸುವ, ಆ ಮೂಲಕ ಕನ್ನಡದ ಕಸುವನ್ನು ಬಲಗೊಳಿಸಲು ಕೆಲಸಕ್ಕಾಗಿ ಬೇರೆ ಬೇರೆ ನಾಡುಗಳಲ್ಲಿ ಕನ್ನಡ ’ಪೀಠ’ಗಳನ್ನು ನೆಲೆಗೊಳಿಸಬೇಕೆಂಬ ಮಾತು ಈಗ ಹೆಚ್ಚಾಗಿ ಕೇಳತೊಡಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವೇ ಮೊದಲಾಗಿ ಹಲವರು ಈ ನಿಟ್ಟಿನಲ್ಲಿ ತಮ್ಮ ದನಿ ಸೇರಿಸುತ್ತಿದ್ದಾರೆ. ಇಂತಹ ಮಾತು ಮೊದಲಾಗಿ ಸರಿ ಸುಮಾರು ಇಪ್ಪತ್ತೈದು ವರುಶಗಳೇ ಸಂದಿವೆ. ನಾನು ಇದನ್ನೇ ನಂಬಿದ್ದವನು. ಆಗ ಅಮೆರಿಕದ ಒಂದು ವಿಶ್ವವಿದ್ಯಾಲಯದಲ್ಲಿ ಕನ್ನಡ ಓದಿನ ಸವಲತ್ತು ದೊರೆಯುವಂತೆ ಮಾಡಲು ಅಲ್ಲಿನ ಕನ್ನಡಿಗರೊಡನೆ ಮುಂದಾವನೇ ಸರಿ. ಆದರೆ ಈಗ ಅನ್ನಿಸುತ್ತಿರುವುದೇ ಬೇರೆ. ಹೀಗೆ ಮಾಡಬೇಕೆಂಬ ಉಮೇದು ನಮ್ಮ ಕಡೆಯಿಂದ ಮೊದಲಾಗಿರುವಂತೆ ಬೇರೆ ನಾಡುಗಳ ಜನರಲ್ಲಿ ನಮಗೆ ಕನ್ನಡ ಬೇಕು ; ಕನ್ನಡ ಬದುಕನ್ನು ಅರಿಯಬೇಕು ಎಂಬ ತುರ್ತು ನಮಗೆ ಕಾಣಬರುತ್ತಿಲ್ಲ. ಅವರಲ್ಲಿ ಇಂತಹ ಬಯಕೆ ಮೂಡುವಂತೆ ನಮ್ಮ ಸಾಮಗ್ರಿಗಳನ್ನು ಮಾರುಕಟ್ಟೆಗೆ ತಕ್ಕಂತೆ ಹೊಂದಿಸಿಡಬೇಕೆಂಬ ನಿಲುವು ನಮ್ಮದಾಗಬೇಕೇ? ಒಂದು ವೇಳೆ ಕನ್ನಡ ನುಡಿ,ಬರಹ ಮತ್ತು ಬದುಕನ್ನು ಬೇರೆ ನುಡಿಯವರು ಅರಿಯುವಂತೆ ಮಾಡುವಲ್ಲಿ ನಾವು ಗೆದ್ದೆವಾದರೆ ಅದರಿಂದ ನಮ್ಮ ಸುತ್ತಮತ್ತಣ ಬದುಕು ಹಸನಾಗುವುದೇ?
ಕನ್ನಡ ನುಡಿಯನ್ನು ಈ ನಾಡಿನಲ್ಲೇ ಎಲ್ಲರ ನುಡಿಯನ್ನಾಗಿ ಮಾಡಲು, ನಮ್ಮ ಬದುಕನ್ನು ಕಟ್ಟಿಕೊಳ್ಳುವ ನೆಲೆಯನ್ನಾಗಿ ಕನ್ನಡವನ್ನು ಬೆಳೆಸಲು ಇನ್ನೂ ಅಗಿಲ್ಲ. ಆ ದಿಕ್ಕಿನಲ್ಲಿ ನಾವು ಏನೂ ಮಾಡುತ್ತಿಲ್ಲ. ಬದಲಿಗೆ ಇಲ್ಲಿ ಹುಟ್ಟಿ ಬೆಳೆವ ಮಕ್ಕಳಿಗೆ ಕನ್ನಡ ಒಂದು ಹೊರೆ ಎಂಬಂತೆ ಮಾಡುತ್ತಿದ್ದೇವೆ. ಕನ್ನಡ ಬದುಕನ್ನು ಅರಿಯಲು ಇಂಗ್ಲಿಶನ್ನು ನೆಮ್ಮಿ ಹೊರಟಿದ್ದೇವೆ. ಹೆಚ್ಚಿನ ಕಲಿಕೆಯಲ್ಲಿ ಕನ್ನಡಕ್ಕೆ ದೊರೆಯಬೇಕಾದ ಜಾಗವನ್ನು ನೀಡಲು ನಮಗಿನ್ನೂ ಆಗಿಲ್ಲ. ಈ ದಿಕ್ಕಿನಲ್ಲಿ ಬೇಕಾದ ಕೆಲಸಗಳನ್ನು ಕೈಗೊಳ್ಳದೆ ಯಾವುದೋ ನಾಡುಗಳಲ್ಲಿ ಕನ್ನಡ ಸಸಿಯನ್ನು ನಟ್ಟು ಬೆಳೆಸಿ ಹೆಮ್ಮೆ ಪಡುವ ಹುಮ್ಮಸ್ಸು ಏಕೆ? ಅದೂ ಇಂಗ್ಲಿಶ್ ಇಲ್ಲವೇ ಯೂರೋಪಿನ ನುಡಿಗಳನ್ನಾಡುವ ನಾಡುಗಳಲ್ಲೇ ಇಂತಹ ಕೆಲಸಗಳನ್ನು ಮಾಡಬೇಕೆಂದು ಮುಂದಾಗಿದ್ದೇವೆ. ಚೀನಾ,ಜಪಾನ್,ಕೊರಿಯಾ, ಟಿಬೆಟ್ ಮುಂತಾದ ನಾಡುಗಳು ನಮ್ಮ ಕಣ್ಣೆದುರಿಗೆ ಸುಳಿಯುವುದೂ ಇಲ್ಲ.ಇದೂ ಒಂದು ಅಚ್ಚರಿಯೇ ಸರಿ.
ಇಂಡಿಯಾದ ಬೇರೆ ನುಡಿಗಳನ್ನಾಡುವ ಕಡೆಗಳಲ್ಲಿ ಕೂಡ ಕನ್ನಡವೆಂಬುದು ಕಡೆಗಣನೆಗೆ ಒಳಗಾಗಿದೆ ಎಂಬು ಕೊರಗುತ್ತೇವೆ. ಸರಿ. ಆದರೆ ಹೀಗಾಗಿರುವುದಕ್ಕೆ ಎರಡು ನೆಲೆಗಳಿವೆ. ೧.ಬೇರೆಯವರಿಗೆ ನಮ್ಮ ನುಡಿ,ಬದುಕು,ಬರಹಗಳನ್ನು ತಿಳಿಯುವ ಬಯಕೆ ಇಲ್ಲದಿರುವುದಕ್ಕೆ ನಮ್ಮನ್ನು ನಾವು ಅವರೆದರು ಸುಳಿದಾಡಿ ಒಲಿಸಿಕೊಳ್ಳದಿರುವುದೇ ಕಾರಣ; ಅದಕ್ಕಾಗಿ ಕೋಟಿಗಟ್ಟಲೆ ಕಾಸನ್ನು ಮುಡಿಪಿಡಬೇಕೆಂದು ಬಯಸುವುದರಿಂದ ಏನೂ ಆಗುವುದಿಲ್ಲ. ಬೇರೆ ನುಡಿಯವರು ನಮ್ಮನ್ನು ಅರಿಯಲು ಮುಂದಾಗುವಂತೆ ನಮ್ಮ ಕಸುವನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ. ನಾವೇ ನಮ್ಮಲ್ಲಿ ನಂಬಿಕೆಯನ್ನು ಗಟ್ಟಿ ಮಾಡಿಕೊಳ್ಳಬೇಕಾಗಿದೆ. ಈಗ ಏನಾಗಿದೆ? ಕಲಿಕೆಯಲ್ಲಿ ಕನ್ನಡಕ್ಕೆ ಹಿಂದಿನ ಮಣೆ; ಸಂಸ್ಕೃತ ಮತ್ತು ಇಂಗ್ಲಿಶಿನ ಹೊರೆಯಿಂದ ಬದುಕನ್ನು ಅರಿಯುವ ನಮ್ಮ ಹತ್ಯಾರುಗಳು ನಮಗೇ ಗೊತ್ತಿಲ್ಲದಂತೆ ನಮ್ಮನ್ನು ಇನ್ನಷ್ಟು ಕುಗ್ಗಿಸುತ್ತಿವೆ. ಜನರ ಬದುಕಿಗೂ ನಾವು ಕಟ್ಟುತ್ತಿರುವ ಅರಿವಿಗೂ ಯಾವ ನಂಟೂ ಇಲ್ಲವೆಂಬಂತಾಗಿದೆ. ಇದು ಇಂಗ್ಲಿಶನ್ನೇ ಮೊದಲ ಮಣೆಯಲ್ಲಿ ಕೂರಿಸಿಕೊಂಡವರು ನೀಡುತ್ತಿರುವ ತಿಳುವಳಿಕೆಗೆ ಹೊಂದುವಂತೆ, ಕನ್ನಡದ ಮೂಲಕ ಕನ್ನಡ ಬದುಕನ್ನು ಅರಿಯುವ ಕಡೆಗೆ ಮೊಗ ಮಾಡಿರುವವರು ಕಟ್ಟುತ್ತಿರುವ ತಿಳುವಳಿಕೆಗೂ ಹೊಂದುತ್ತದೆ. ಏಕೆಂದರೆ ಕನ್ನಡ ಮೂಲಕ ದೊರೆಯುತ್ತಿರುವ ಈ ತಿಳಿವಳಿಕೆಯೂ ಇಂಗ್ಲಿಶಿನ ನೆರಳೇ ಆಗಿದೆ.
೨. ಬೇರೆ ನಾಡುಗಳಲ್ಲಿ ಹಲವಾರು ವರುಶಗಳಿಂದ ಕನ್ನಡ ನುಡಿ,ನಾಡು,ಬರಹ,ಬದುಕನ್ನು ಅರಿತು ,ಅದರ ಕಸುವನ್ನು ತಿಳಿಯಲು ಮುಂದಾದವರೂ ಇದ್ದಾರೆ. ಅವರಲ್ಲಿ ಅಲ್ಲಿ ಹೋಗಿ ಓದು ಮುಂದುವರೆಸಿದ ಕನ್ನಡಿಗರಿರುವಂತೆ ಬೇರೆ ನುಡಿಯನ್ನಾಡುವವರೂ ಇದ್ದಾರೆ. ಇಂತಹವರೂ ಇಲ್ಲಿಬಂದು ತಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಂಡಿರುವುದೂ ಉಂಟು. ಆದರೆ ಅವರ ಎಲ್ಲ ಬರಹಗಳೂ ಇಂಗ್ಲಿಶ್, ಫ್ರೆಂಚ್, ಜರ‍್ಮನ್ ಮುಂತಾದ ನುಡಿಗಳಲ್ಲಿವೆ. ಈಗ ಹೆಚ್ಚಿನ ಕಲಿಕೆಯಲ್ಲಿ ತೊಡಗಿಕೊಂಡಿರುವ ಸಾವಿರಾರು ಮಕ್ಕಳಿಗೆ ಆ ತಿಳುವಳಿಕೆ ದಕ್ಕುತ್ತಲೇ ಇಲ್ಲ. ಆ ತಿಳಿವೆಲ್ಲ ಅಚ್ಚಿನ ಪುಟಗಳಲ್ಲಿ ಅಡಗಿ ಕುಳಿತಿದೆ. ಅದೆಲ್ಲವನ್ನೂ ಕನ್ನಡ ಮಕ್ಕಳು ಓದ ಬೇಕೆಂದು ಈ ಮಾತು ಹೇಳುತ್ತಿಲ್ಲ. ಇಂಗ್ಲಿಶಿನಲ್ಲಿ ಇಲ್ಲವೇ ಬೇರೆ ನುಡಿಗಳಲ್ಲಿ ಮೈತಳೆದ ಆ ತಿಳಿವಿಗೆ ಕನ್ನಡದ ಚೌಕಟ್ಟು ಇಲ್ಲ. ಅದು ಈ ಬದುಕಿನೊಳಗಿಂದ ಹುಟ್ಟಿದ ತಿಳುವಳಿಕೆಯಲ್ಲ. ಹಾಗಾಗಿ ಅದರ ಹೆಚ್ಚುಪಾಲು ನಮಗೆ ತಿಳಿಯದಿದ್ದರೂ ಕೊರತೆ ಏನಿಲ್ಲ.
ಈಗ ನಾವು ಹೊರ ನಾಡುಗಳಲ್ಲಿ ಕನ್ನಡದ ಬಾವುಟವನ್ನು ನೆಡಬೇಕೆಂದು ಹೊರಟಿರುವುದು ಮತ್ತೆ ಇಂತಹುದೇ ತಿಳಿವನ್ನು ಕಟ್ಟಲೆಂದು ತಾನೆ? ಜೊತೆಗೆ ಇಂತಹ ತಿಳುವಳಿಕೆಯನ್ನು ಕಟ್ಟುವವರಿಗೆ ಬೇಕಾದ ಪರಿಕರ, ತರಬೇತುಗಳನ್ನು ನೀಡುವುದೇ ನಮ್ಮ ಗುರಿಯೇನು? ಇದರಿಂದ ಈ ನಾಡ ಜನರಿಗೆ ದೊರಕುವುದಾದರೂ ಏನು?
ಇವೆಲ್ಲ ಮಾತುಗಳು ನುಡಿಯ ಬಗೆಗೆ ಹೆಮ್ಮೆ ಇಲ್ಲದವರ ಬಡಬಡಿಕೆ ಎಂದು ತಿಳಿಯಬಾರದು.ಹಾಗೆ ತಿಳಿದು ದಿಟವಾದ ಗೊಂದಲವನ್ನು ಅರಿಯದೇ ಬೇರೆ ಕಡೆ ಮೊಗದಿರುಹ ಬಾರದು. ಮನೆಗೆದ್ದು ಮಾರುಗೆಲ್ಲು ಎಂಬ ನಾಣ್ನುಡಿಯನ್ನು ನೆನೆಯೋಣ. ಇಲ್ಲಿ ನಮ್ಮ ತಿಳಿವಿನ ಹಾದಿಗಳನ್ನು ನೇರ್ಪಡಿಸಿಕೊಂಡು ಕನ್ನಡ ನುಡಿ ಜನರ ನಂಬಿಕೆಯ ನೆಲೆಯಾಗುವಂತೆ ಮಾಡಬೇಕಿದೆ. ಇದು ಆಗದೆ ಬರಿ ಹೆಮ್ಮೆಯನ್ನೇ ನಂಬಿ ಮುನ್ನುಗ್ಗುವುದು ಸರಿಯಾಗದು ಎಂಬ ಅರಿವು ಮೂಡಬೇಕು.

ಸೋಮವಾರ, ನವೆಂಬರ್ 21, 2011

ನೆಲದ ಮೇರೆಗಳ ಕರ್ನಾಟಕ

ನೆಲದ ಮೇರೆಗಳನ್ನು ಕರ್ನಾಟಕ ಎಂದು ಕರೆದದ್ದು ಒಂದು ರಾಜಕೀಯ ಆಯ್ಕೆ. ಅದಕ್ಕಾಗಿ ಹಂಬಲಿಸಿ,’ಹೋರಾಡಿದ’ವರೂ ಬಿಸಿಲುಗುದುರೆಯ ಬೆನ್ನು ಹತ್ತಿದ್ದವರು. ಬೇರೆಬೇರೆ ನುಡಿಯಾಡುವವರ ಆಳ್ವಿಕೆಯಿಂದ ಹೊರಬರಲು ’ಕರ್ನಾಟಕ ರತ್ನ ಸಿಂಹಾಸನದ’ ಒಡೆಯರಾಗಿದ್ದ ಮೈಸೂರು ಅರಸರ ನೆರಳಿಗಾಗಿ ಕಾತರಿಸಿದ್ದವರು. ಕರ್ನಾಟಕವೆಂದು ಹುಟ್ಟಿದ್ದು ದಿಟವಾಗಿ ’ವಿಶಾಲ ಮೈಸೂರು’ ಮಾತ್ರವೇ ಆಗಿತ್ತು.. ಮೊದಲಿದ್ದ ಹಳೆಯ ಮೈಸೂರು ಇನ್ನಷ್ಟು ಜಿಲ್ಲೆಗಳಿಗೆ ಹರಡಿಕೊಂಡು ದೊಡ್ಡದಾಯಿತು. ದಿಟವಾಗಿ ಕರ್ನಾಟಕವೆಂಬ ಬಿಂಬವೊಂದು ಜನರಲ್ಲಿ ಬೇರೂರಲು ಇರಬೇಕಾಗಿದ್ದ ಬದುಕಿನ ನೆಲೆಯ ಒತ್ತಡಗಳು ಅಂದು ಬಲವಾಗಿ ಇದ್ದಂತೆ ತೋರುವುದಿಲ್ಲ.
ಇಂದಿಗೂ ಕರ್ನಾಟಕವನ್ನು ನೆಲದ ಗಡಿಗೆರೆಗಳು ಕಟ್ಟುತ್ತಿರುವ ನಾಡಿನ ಮೂಲಕವೇ ರಾಜಕೀಯವಾಗಿ ಉಸಿರಾಡಿಸುತ್ತ ಉಳಿಸಿಕೊಳ್ಳಲಾಗಿದೆ. ಬದುಕಿನ ತೆರದ ದಾರಿಗಳು ಜನರು ಈ ಗಡಿಗೆರೆಗಳನ್ನು ದಾಟಿ ಒಳಹೊರಗೆ ನಡೆಯುತ್ತಿಲೇ ಇದ್ದಾರೆ .ಇವರು ಕೂಲಿಕಾರರಿರಬಹುದು; ಉದ್ದಿಮೆದಾರರಿರಬಹುದು, ಬಗೆಬಗೆಯ ವ್ಯಾಪಾರಗಳಲ್ಲಿ ತೊಡಗಿದವರಿರಬಹುದು. ಇವರೆಲ್ಲರಿಗೂ ಕರ್ನಾಟಕವೆಂದರೆ ಇಂದು ರಾಜಕೀಯ ಚಹರೆಯೇ ಹೊರತು ಕುವೆಂಪು ಬಯಸಿದಂತೆ ಮಂತ್ರವಾಗಲಿಲ್ಲ. ಹಾಗಾಗಲಿಲಗಲ ಎಂದು ಹಳಹಳಿಕೆಯಲ್ಲಿ ಈ ಮಾತನ್ನು ಹೇಳುತ್ತಿಲ್ಲ. ಬದಲಿಗೆ ಇಂದು ನಾವು ನೋಡುತ್ತಿರುವ ಬೇರು ಸತ್ತ ಮರದಂತ ಕರ್ನಕದ ಉಸಿರು ಕುಗ್ಗಿಸಲು ಐದಾರು ದಾಸಕಗಳಿಂದ ಎಡೆಬಿಡದೆ ಹುನ್ನಾರಗಳು ನಡೆಯುತ್ತಲೇ ಇವೆ ಎಂಬುದನ್ನು ಗಮನಿಸಿದಾಗ ಹೀಗಾಗಿದ್ದು ತಟಕ್ಕನೇ ಆದುದಲ್ಲ. ಹೀಗಾಗಲೆಂಬ ಬಯಕೆಯೂ ರಾಜಕೀಯವಾಗಿ ಕೆಲಸಮಾಡಿದಂತಿದೆ.
ಕರ್ನಾಟಕವೆಂಬ ರಾಜ್ಯದ ಚಹರೆಯನ್ನು ಕಟ್ಟಲು ಚರಿತ್ರೆ,ಸಮಾಜ,ರಾಜಕಾರಣ,ಬದುಕಿನ ಬಗೆ ಇವೇ ಮುಂತಾದ ಹಲವು ನೆಲೆಗಳನ್ನು ಬಳಸಿಕೊಳ್ಳಲಾಗಿದೆ. ಈ ನೆಲೆಗಳಲ್ಲಿ ಕಟ್ಟಿದ ಕರ್ನಾಟಕಗಳು ಒಂದರೊಡನೊಂದು ತಾಳೆಯಾಗುತ್ತವೆಯೇ ಎಂಬುದನ್ನು ಅರಿಯಲು ಯಾರೂ ಮುಂದಾಗಿಲ್ಲ. ಹಾಗೆ ನೋಡಲು ಹೊರಟರೆ ಇವೆಲ್ಲವೂ ಬೇರೆ ಬೇರೆ ಆಗಿಯೇ ಉಳಿದು ಬಿಟ್ಟಿವೆ ಎನ್ನುವುದು ಕಣ್ಣಿಗೆ ರಾಚುವಂತಿದೆ. ಇವೆಲ್ಲವನ್ನೂ ಹಿಡಿದು ಕಟ್ಟುವ ಕರ್ನಾಟಕವೆಂಬ ಒಂದು ಗುರುತು ಮೈದಳೆಯಲು ಈವರೆಗೆ ಆಗಿಲ್ಲ. ಚರಿತ್ರೆಯ ನೆರವಿನಿಂದ ಕಟ್ಟಿದ ಕರ್ನಾಟಕವೆಂಬುದು ಒಂದು ಗುರುತಾಗಿ ಕಂಡರೂ ಅದು ಜನರ ಹಕ್ಕಾಗಿ ಉಳಿದಿಲ್ಲ; ಅದು ಅವರಿಗೆ ಬೇಡದ ಹೊರೆ. ತಾವು ಅದಕ್ಕೆ ಹಕ್ಕುದಾರರು ಎಂದು ಅವರು ತಿಳಿದಂತೆ ತೋರುವುದಿಲ್ಲ. ಇದಲ್ಲದೆ ಬದುಕಿನ ದಾರಿಗಳನ್ನು ಕಟ್ಟಿಕೊಳ್ಳಲು ಬೇಕಾದ ಅವಕಾಶಗಳು ಕಡಿಮೆಯಾಗುತ್ತ ಹೋಗುತ್ತಿರುವಾಗ ಜನರಿಗೆ ಈ ನೆಲವೆಂಬುದು ತಾವು ಬೇರು ಬಿಡಬೇಕಾದ ಜಾಗವೆಂದು ಅನಿಸುತ್ತಲೇ ಇಲ್ಲ.
ಒಗ್ಗೂಡಿದ ಕರ್ನಾಟಕ ಮೈದಳೆದಾಗ ಅದೊಂದು ಹರಿದ ಬಟ್ಟೆಯನ್ನು ಹೊಲಿಗೆ ಹಾಕಿ ನಯಗಾರಿಕೆಯಿಂದ ಹೊಸದರಂತೆ ಮಾಡಿರಿಸಿದ್ದಾಗಿತ್ತು. ದಿನಗಳೆಂದಂತೆ ಆಗ ಇದ್ದ ಹರಕಲುಗಳಲ್ಲದೆ ಹೊಸ ಬಿರುಕುಗಳು ಸೀಳುಗಳು ಈಗ ಕಾಣತೊಡಗಿವೆ. ನೆಲ, ನೀರು, ನೆಲದೊಳಗಿನ ಸಂಪತ್ತು, ಬೆಳೆ, ಕುಲಕಸುಬು ಇವು ಯಾವುವೂ ಈಗ ಜನರನ್ನು ಈ ನೆಲಕ್ಕೆ ಕಟ್ಟಿ ಹಾಕುತ್ತಿಲ್ಲ. ಎಲ್ಲವೂ ಅವರಿಂದ ದೂರವಾಗ ತೊಡಗಿವೆ. ಹೊಟ್ಟೆಹೊರೆಯಲು ಇದ್ದ ದಾರಿಗಳು ಬಹುಪಾಲು ಜನರಿಗೆ ಮುಚ್ಚಿಹೋಗಿವೆ.
ಕಳೆದ ಐವತ್ತೈದು ವರುಶಗಳಲ್ಲಿ ಆಡಳಿತವನ್ನು ಬೇರು ಮಟ್ಟಕ್ಕೆ ತರಬೇಕೆಂಬ ಎಲ್ಲ ಯೋಜನೆಗಳೂ ತಲೆಕೆಳಗು ಪರಿಣಾಮವನ್ನು ಉಂಟುಮಾಡಿವೆ. ಅಧಿಕಾರದ ಹಿಡಿತ ಇನ್ನೂ ಬೆಂಗಳೂರು ದೆಹಲಿಗಳಲ್ಲೇ ಉಳಿದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜಾತಿಯ ಸೀಳುಗಳು ಜನರ ಬದುಕನ್ನು ಬರಿದುಗೊಳಿಸುತ್ತ ನಡೆದಿವೆ. ಬಡವರು, ಕೆಳಜಾತಿಯವರು,ಹಿಂದುಳಿದವರು, ಹಿಂದುಗಳು ಎನಿಸಿಕೊಳ್ಳದವರು ಈಗ ಪಡಿಪಾಟಲಿನ ಕಡಲಿನಲ್ಲಿ ಮುಳುಗುತ್ತಿದ್ದಾರೆ. ನಗರಗಳು ಲೂಟಿಕೋರರ ತಾಣಗಳಾಗಿವೆ. ಇಲ್ಲಿ ಅಷ್ಟಿಷ್ಟು ಇದ್ದವರ ಕನಸುಗಳೂ ಸೋಪಿನ ಗುಳ್ಳೆಗಳಂತೆ ಬಣ್ಣತೋರಿ ಮರೆಯಾಗುತ್ತಿವೆ.
ಇದೆಲ್ಲ ಹೀಗೇಕಾಯಿತು? ಇದಕ್ಕೆ ಎರಡು ನೆಲೆಗಳಲ್ಲಿ ಕಾರಣಗಳನ್ನು ಹುಡುಕಬೇಕಾಗುತ್ತದೆ. ಒಂದು ಕರ್ನಾಟಕ ರಾಜ್ಯವೆಂಬುದು ಮೈದಳೆಯುವಾಗಲೇ ಅಡಕವಾಗಿದ್ದು ಆಗ ಕಣ್ಣಿಗೆ ಕಾಣದೆ ಇದ್ದ ಕಾರಣಗಳು. ಇನ್ನೊಂದು ಕಾರಣವೆಂದರೆ ರಾಜ್ಯ ಮೈದಳೆದ ಮೇಲೆ ನಡೆದ ಆಡಳಿತದ ದಿಕ್ಕುದೆಸೆಗಳಿಂದಾಗಿ ರಾಜ್ಯವೆಂಬುದು ಕೇವಲ ನಕಾಶೆಯಾಗಿ ಮಾತ್ರ ಉಳಿಯುವಂತಾದುದು. ಮೊದಲನೆಯದನ್ನು ನೋಡೋಣ. ಕರ್ನಾಟಕ, ಕನ್ನಡ ಮತ್ತು ಕನ್ನಡಿಗರು ಎಂಬ ಮೂರೂ ಎಂದೂ ಮುಪ್ಪುರಿಯಾಗಿ ಹೆಣೆದುಕೊಂಡಿರಲೇ ಇಲ್ಲ. ಹೀಗಾಗಿ ಈ ಮೂರನ್ನೂ ಹೆಣೆಯಲೆಂದೇ ಕಟ್ಟಿದ ಕರ್ನಾಟಕ ತನ್ನ ಒಡಲಿನಲ್ಲೇ ಸೀಳುಗಳನ್ನು ಹೊಂದಿತ್ತು. ಕರ್ನಾಟಕದಲ್ಲಿ ಇದ್ದವರು ಕನ್ನಡಿಗರು ಎಂಬ ಹೇಳಿಕೆಯೀಗ ಹಲವು ನೆಲೆಗಳಲ್ಲಿ ಹುಸಿಯಾಗ ತೊಡಗಿದೆ. ಶಿಕ್ಷಣ, ಉದ್ಯೋಗ, ಉದ್ದಿಮೆಯ ಸವಲತ್ತು ಇವೇ ಮುಂತಾದ ವಲಯಗಳಲ್ಲಿ ಯಾರನ್ನು ಕನ್ನಡಿಗರು ಎಂದು ಕರೆಯ ಬೇಕೆಂಬುದು ಬೇಕಾಬಿಟ್ಟಿಯಾದ ಉತ್ತರಗಳನ್ನು ಪಡೆದುಕೊಂಡಿದೆ. ಅಲ್ಲದೆ ಆ ಉತ್ತರಗಳು ವರುಶಗಳು ಕಳೆದಂತೆ ಬದಲಾಗುತ್ತಲೇ ನಡೆದಿವೆ. ಅಂದರೆ ಮೊದಲಿದ್ದ ಸೀಳುಗಳು ರಾಚುವಂತಾಗಲು ಬಳಿಕ ನಡೆದ ಆಡಳಿತದ ತೀರ್ಮಾನಗಳು ಕಾರಣವಾಗಿವೆ ಎಂದಾಯ್ತು.
ಇನ್ನು ಕನ್ನಡ ಮತ್ತು ಕರ್ನಾಟಕ ಎನ್ನುವುದೂ ಕೂಡ ಬೆಸುಗೆಯನ್ನು ಪಡೆದು ಕೊಂಡಿಲ್ಲ. ದಿನಗಳೆದಂತೆ ಇವೆರಡೂ ಒಂದಕ್ಕೊಂದು ನಂಟಿಲ್ಲದಂತೆ ಸಾಗತೊಡಗಿವೆ. ಕಲಿಕೆ, ಆಡಳಿತ ಮತ್ತು ವಾಣಿಜ್ಯ ವಲಯಗಳಲ್ಲಿ ಕನ್ನಡವೆಂಬುದು ಈಗ ಕೇಳುವರಿಲ್ಲದ ಮಗು. ಕನ್ನಡ-ಇಂಗ್ಲಿಶ್‌ಗಳ ನಂಟು ಈಗ ಎಲ್ಲೆಲ್ಲೋ ಡಿಕ್ಕಿ ಹೊಡೆಯುತ್ತಿದೆ. ಹಳೆಯ ಹೋಲಿಕೆಯನ್ನು ಬಳಸಿ ಹೇಳುವುದಾದರೆ ಈ ಎರಡೂ ನುಡಿಗಳಲ್ಲಿ ಒಂದು ಕಾಲಿಗೆ ಕಟ್ಟಿದ ಗುಂಡು ಹಾಗಾಗಿ ಅದು ತೇಲಲು ಬಿಡುವುದಿಲ್ಲ; ಇನ್ನೊಂದು ನುಡಿ ಸೊಂಟಕ್ಕೆ ಕಟ್ಟಿದ ಬೆಂಡು. ಹಾಗಾಗಿ ಅದು ಮುಳುಗಲು ಬಿಡುವುದಿಲ್ಲ. ಆದರೆ ನೀರಿಗೆ ಬಿದ್ದವರಿಗೆ ಯಾವ ನುಡಿ ಗುಂಡು ಮತ್ತು ಯಾವ ನುಡಿ ಬೆಂಡು ಎಂಬುದು ಬಿಡಿಸಲಾಗದ ಕಗ್ಗಂಟಾಗಿ ತೋರತೊಡಗಿದೆ. ಕನ್ನಡ ಮಾತಾಡುವವರ ರಾಜ್ಯವೆಂಬ ಹೆಸರಿನಲ್ಲಿ ಮೊದಲಾದ ಕರ್ನಾಟಕವೀಗ ಕನ್ನಡದ ಉಸಿರುಗಟ್ಟಿಸುತ್ತಿದೆ. ರಾಜ್ಯಾಡಳಿತವಂತೂ ಇಂಗ್ಲಿಶ್ ತೇಲಿಸುವುದೆಂದೂ ಕನ್ನಡ ಮುಳುಗಿಸುವುದೆಂದು ನಂಬಿದೆ; ಹಾಗೆ ನಂಬಲು ಜನರನ್ನು ಒತ್ತಾಯಿಸುತ್ತಿದೆ.
ಈ ನೆಲೆಯಲ್ಲೇ ಕನ್ನಡ ಮತ್ತು ಕನ್ನಡಿಗರು ಎಂಬ ಎಳೆಗಳ ನಡುವೆ ಉಂಟಾಗಿರುವ ಸೀಳನ್ನು ನೋಡಬಹುದು. ಒಂದೇ ನುಡಿಯನ್ನು ಬಲ್ಲವರು ಮತ್ತು ಅದು ಕನ್ನಡ ಮಾತ್ರ ಆಗಿರುವವರು ಕನ್ನಡಿಗರು ಎಂದು ಕರೆದರೆ ಆಗ ಕನ್ನಡಿಗರೆಂಬುವವರೇ ಕಡಿಮೆಯಾಗುತ್ತ ನಡೆದಿದ್ದಾರೆ. ವಯಸ್ಸಾದವರು, ಊರೂರು ಸುತ್ತಲಾರದ ಇಲ್ಲವೇ ದುಡಿಮೆಯಲ್ಲಿ ತೊಡಗಿಸಿಕೊಳ್ಳಲಾಗದ ಹೆಂಗಸು ಮಾತ್ರವೇ ಕನ್ನಡಿಗರೆನಿಸಿಕೊಳ್ಳ ಬಲ್ಲರು. ಹಾಗಾಗಿ ಈ ಎರಡು ಎಳೆಗಳು ಈಗ ಹೆಣೆದುಕೊಳ್ಳಲಾರವು.
ಕಳೆದ ಐವತ್ತೈದು ವರುಶಗಳು ರಾಜ್ಯವೆಂಬುದು ಜನರನ್ನು ಕಾಯುವ ,ಅವರ ಬೇಕುಬೇಡಗಳಿಗೆ ಮಿಡಿಯುವ ನೆಲೆ ಎಂಬುದು ಹುಸಿ ಎಂಬುದನ್ನು ತೋರಿಸಕೊಟ್ಟಿವೆ. ಏಕೆಂದರೆ ರಾಜ್ಯವೆಂಬ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ನಾವು ಕಟ್ಟಿಕೊಂಡಿರುವ ನೆಲೆಗಳು ಜನರ ದುಡಿಮೆಯ ಬಹುಪಾಲನ್ನು ನುಂಗಿ ಹಾಕುತ್ತಿವೆ; ಆದರೆ ಅದರಿಂದ ಜನರಿಗೆ ಏನೇನೂ ನೆರವು ದೊರೆಯುತ್ತಿಲ್ಲ. ಜನರಲ್ಲಿ ನಾಡಿನ ಹಿರಿಮೆಯ ಬಗೆಗೆ ಹೆಮ್ಮೆಯನ್ನು ಮೂಡಿಸಲು ಏನೆಲ್ಲ ಕಸರತ್ತುಗಳನ್ನು ಉತ್ಸವ,ಪ್ರಶಸ್ತಿ, ಆಚರಣೆಗಳ ಮೂಲಕ ಯತ್ನಿಸಿದರೂ ಅದೆಲ್ಲವೂ ಕೆಲಸಕ್ಕೆ ಬರುತ್ತಿಲ್ಲ. ಸಮ್ಮೇಳನಗಳಿಗೆ, ಉತ್ಸವಗಳಿಗೆ ಜನರು ಮುಗಿಬಿದ್ದು ಬರುವುದನ್ನು ಬಣ್ಣಿಸುತ್ತ ಇದೆಲ್ಲವೂ ನಾಡಿನ ಬಗೆಗೆ ಜನರಲ್ಲಿ ಹೆಮ್ಮೆ ಮೂಡುತ್ತಿದೆ ಎಂಬುದರ ಸೂಚನೆ ಎಂದು ನಂಬಿಸಲು ತೊಡಗಿದ್ದರೂ ದಿಟ ಬೇರೆಯೇ ಆಗಿದೆ. ಜನರು ಏಕೆ ಎಲ್ಲಿಗಾದರೂ ಮುನ್ನುಗುತ್ತಾರೆ ಎಂಬುದಕ್ಕೆ ಬೇರೆಯೇ ವಿವರಣೆ ಬೇಕಿದೆ. ಅದು ಹೆಮ್ಮೆಯ ಗುರುತಂತೂ ಅಲ್ಲ.
ಮತ್ತೆ ಮೊದಲ ಮಾತಿಗೆ ಬರೋಣ.ಬೆಳೆ ನೀಡುವ ಜಮೀನು, ಕಾಡುಗಳು, ಹರಿಯುವ ನೀರು, ತಲಾತಲಾಂತರದಿಂದ ಬಂದ ಕಸುಬುಗಳು ಈಗ ಜನರ ಹಕ್ಕಾಗಿ ಉಳಿದಿಲ್ಲ. ಜನರ ಒಳಿತು ಎಂದರೆ ಅವರ ಅಂದಂದಿನ ಹೊಟ್ಟೆಯ ಬೇಡಿಕೆಗಳನ್ನು ಪೂರೈಸುವುದು ಎಂದು ತಿಳಿದಿರುವುದರಿಂದ ಅದಕ್ಕೆ ಬೇಕಾದಂತೆ ಎಲ್ಲವೂ ಅಣಿಗೊಳ್ಳುತ್ತಿವೆ. ಆದರೆ ಜನರು ಸಮುದಾಯವಾಗಿ, ಪೌರ ಸಮಾಜವಾಗಿ ಬೆಳೆಯುವುದಾದರೆ ಆಗ ಆಯಾ ಹೊತ್ತಿನ ಬೇಡಿಕೆಗಳು ಈಡೇರಿದರೆ ಸಾಲದು. ಅದನ್ನು ಮೀರಿದ ನಾಳೆಗಳ ಕನಸನ್ನು, ಹೊಣೆಯನ್ನು ಮತ್ತು ಹಕ್ಕುಗಳನ್ನು ಹುಟ್ಟಿಹಾಕಬೇಕಾಗುತ್ತದೆ. ಆದರೆ ಈ ದಿಕ್ಕಿನಲ್ಲಿ ಏನೂ ನಡೆಯುತ್ತಿಲ್ಲ. ಹಾಗಾಗಿ ಇದೆಲ್ಲವೂ ದಾರವಿಲ್ಲದ ಸೂಜಿಯಿಂದ ಮಾಡಿದ ಹೊಲಿಗೆಯಂತಾಗಿದೆ.
ಇಪ್ಪತ್ತೊಂದನೆಯ ಶತಮಾನ ಬಯಸುವ ನೆಲೆಗಳಲ್ಲಿ ರಾಜ್ಯಗಳಿಗೆ ಜಾಗ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಒಂದು ವೇಳೆ ಜಾಗ ಇದ್ದರೂ ಅದು ಈಗಿರುವ ಮಾದರಿಯಲ್ಲಿ ಇರಲಾರದು. ಅದರ ಚಹರೆಗಳನ್ನು ಹುಡಕಬೇಕಿದೆ. ಅದಕ್ಕೆ ತಕ್ಕಂತೆ ಮುಂದಿನ ಹೆಜ್ಜೆ ಇಡಬೇಕಾಗಿದೆ. ಅಲ್ಲಿಯವರೆಗೆ ರಾಜ್ಯವೆಂಬುದು ಜನರ ಬೆನ್ನಿನ ಹೊರೆಯೇ ಹೊರತು ಅವರ ಬದುಕನ್ನು ನಿರಾಳಗೊಳಿಸುವ ದಿಟವಂತೂ ಅಲ್ಲ. ಈಗ ನಾಡಗೀತೆಯನ್ನು ಹಾಡುವಾಗ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಬೇಕೆಂದು ಹೇಳುತ್ತಿದ್ದಾರಷ್ಟೆ. ಆಲಾಪ, ಸ್ವರ ಜೋಡಣೆಯಲ್ಲಿ ಆ ಹಾಡು ಮುಗಿಯುವ ವೇಳೆಗೆ ನಿಂತವರು ಚಡಪಡಿಕೆಗೆ ಒಳಗಾಗುವುದನ್ನು ನೋಡುತ್ತಿದ್ದೇವೆ. ಇದನ್ನೇ ಮಾದರಿ ಎನ್ನುವುದಾದರೆ ಮುಂಬರುವ ದಿನಗಳಲ್ಲಿ ಕರ್ನಾಟಕವೆಂಬ ರಾಜ್ಯ ವ್ಯವಸ್ಥೆಯು ಹೀಗೆ ಮುಂದುವರೆದರೆ ಅದು ಒಂದು ದೊಡ್ಡ ಆಕಳಿಕೆಯಂತೆ ತೋರಿದರೆ ಅಚ್ಚರಿ ಪಡಬೇಕಾಗಿಲ್ಲ.

ಬುಧವಾರ, ನವೆಂಬರ್ 16, 2011

ಕನ್ನಡ ಕ್ಲಾಸಿಕಲ್ ನುಡಿಯಾಯಿತು: ಮುಂದೇನು?


೧. ಕ್ಲಾಸಿಕಲ್ ಎಂಬ ಗುರುತು ಕನ್ನಡಕ್ಕೆ ಬೇಕೋ ಬೇಡವೋ ಎಂಬ ಚರ್ಚೆಗೆ ಈಗ ಚಲಾವಣೆ ಇಲ್ಲವಾಗಿದೆ. ಈ ಗುರುತನ್ನು ಪಡೆದುಕೊಂಡ ಮೇಲೆ ನುಡಿಯ ಬೆಳವಣಿಗೆಗೆ ಏನು ಮಾಡಬೇಕು ಎಂಬದನ್ನು ಕಂಡುಕೊಳ್ಳಬೇಕಾಗಿದೆ.ಮೊದಲಿಗೆ ಕ್ಲಾಸಿಕಲ್ ಎಂಬ ಪದಕ್ಕೆ ಶಾಸ್ತ್ರೀಯ ಎಂದು ಕರೆಯುವುದನ್ನು ನಿಲ್ಲಿಸಬೇಕಾಗಿದೆ. ಕೇಂದ್ರ ಸರ್ಕಾರ ಕ್ಲಾಸಿಕಲ್ ನುಡಿಗಳನ್ನು ಗುರುತಿಸುವ ಆದೇಶವನ್ನು ಹೊರಡಿಸಿದಾಗ ಆ ಆದೇಶದ ಹಿಂದಿ ಆವೃತ್ತಿಯಲ್ಲಿ ಕ್ಲಾಸಿಕಲ್ ಎಂಬುದಕ್ಕೆ ಶಾಸ್ತ್ರೀಯ ಎಂಬ ಪದವನ್ನು ಬಳಸಿದೆ.ನಾವು ಅದನ್ನೇ ಹೊತ್ತು ಮೆರೆಯುತ್ತಿದ್ದೇವೆ. ತಮಿಳು ನುಡಿಯು ಕ್ಲಾಸಿಕಲ್ ಎಂಬುದಕ್ಕೆ ಚೆಮ್ಮೊಳಿ( ಕನ್ನಡ ಬರೆಹದಲ್ಲಿ ಹೀಗೆ ಬರೆಯಬಹುದು.ನುಡಿಯುವ ಬಗೆ ಬೇರೆ)ಎಂದೂ ತೆಲುಗು ನುಡಿಯು ಪ್ರಾಚೀನ ಎಂದು ಕರೆದುಕೊಂಡಿವೆ. ಸಂಸಕ್‌ಋತ,ಲ್ಯಾಟಿನ್, ಹೈ ಅರಾಬಿಕ್,ಲ್ಯಾಟಿನ್ ನುಡಿಗಳನ್ನು ಕ್ಲಾಸಿಕಲ್ ನುಡಿಗಳೆಂದು ಗುರುತಿಸುತ್ತಿರುವ ಬಗೆಗೂ ಕನ್ನಡವನ್ನು ಕ್ಲಾಸಿಕಲ್ ಎಂಬು ಗುರುತಿಸುತ್ತಿರುವು ಬಗೆಗೂ ಬದಲಾವಣೆ ಇರುವುದರಿಂದ ನಾವು ಈಗಲೂ ಬೇರೆಯ ಪದವನ್ನು ಬಳಸುವುದು ಸರಿಯಾದೀತು.
೨. ಈಗ ಕರ್ನಾಟಕ ಸರ್ಕಾರ ಮತ್ತು ನುಡಿಜಾಣರು ಕ್ಲಾಸಿಕಲ್ ಕನ್ನಡವೆಂದರೆ ಕ್ರಿ.ಶ.೧೭೫೦ ರ ವರೆಗೆ ಬರೆಹಗಳಲ್ಲಿ ಕಾಣಸಿಗುವ ಕನ್ನಡವೆಂದು ಮನ್ನಣೆ ಮಾಡುವ ನಿಲುವನ್ನು ತಾಳಿದಂತಿದೆ. ಇದು ಎಲ್ಲೂ ದಾಖಲಾಗಿಲ್ಲವಾದರೂ ಕೇಂದ್ರ ಸರ್ಕಾರಗಳ ಮತ್ತು ರಾಜ್ಯ ಸರ್ಕಾರಗಳ ನಡುವೆ ನಡೆಯುತ್ತಿರುವ ಕಾಗದಪತ್ರ ವ್ಯವಹಾರಗಳಲ್ಲಿ ಈ ನಿಲುವನ್ನು ಒಪ್ಪಿರುವ ಸೂಚನೆಗಳು ಸಿಗುತ್ತಿವೆ. ಈಗ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯು ಕ್ಲಾಸಿಕಲ್ ಕನ್ನಡದ ಬೆಳವಣಿಗೆಗೆ,ಅಧ್ಯಯನಕ್ಕೆ ಬೇಕಾದ ಯೋಜನೆಗಳನ್ನು ರೂಪಿಸುವ ಕೆಲಸವನ್ನು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಗೆ ವಹಿಸಿದೆಯಷ್ಟೆ.( ತೆಲುಗಿಗೆ ಸಂಬಂಧಿಸಿದ ಕೆಲಸವನ್ನೂ ಇದೇ ಸಂಸ್ಥೆ ನಿರ್ವಹಿಸಬೇಕಿದೆ) ಈ ಸಂಸ್ಥೆಯು ಕ್ರಿ.ಶ.೧೭೫೦ ರ ವರೆಗಿನ ಬರೆವಣಿಗೆಯಲ್ಲಿ ಕಂಡುಬರುವ ಕನ್ನಡವನ್ನೇ ಕ್ಲಾಸಿಕಲ್ ಕನ್ನಡವೆಂದು ಒಪ್ಪುವ ಹಾದಿಯಲ್ಲಿರುವಂತಿದೆ. ಈ ನಿಲುವನ್ನು ಮರಳಿ ಪರಿಶೀಲಿಸಬೇಕಿದೆ.
೩. ಎಲ್ಲಕ್ಕಿಂತ ಮೊದಲು ಕನ್ನಡವೆಂದರೆ ಬರೆವಣಿಗೆ,ಅದರಲ್ಲೂ ಸಾಹಿತ್ಯ ಕೃತಿಗಳು ಎಂದು ತಿಳಿಯುವ ನೆಲೆಯಿಂದ ಹೊರಬರಬೇಕು. ಕನ್ನಡದ ಹೆಮ್ಮೆಯ ಗುರುತಾಗಿ ಪಂಪನನ್ನೋ, ಕುಮಾರವ್ಯಾಸನನ್ನೋ, ಹರಿಹರನನ್ನೋ ಬೆರಳು ಮಾಡಿ ತೋರಿಸುವುದಲ್ಲಿ ಮುಳುಗಿಹೋಗಿರುವ ನಾವು ಈ ಚೌಕಟ್ಟಿನಿಂದ ಹೊರಬೀಳಬೇಕು. ಕನ್ನಡವೆಂದರೆ ಜನರಾಡುವ ನುಡಿ ಮತ್ತು ಆ ನುಡಿಯಲ್ಲಿ ಹುದುಗಿರುವ ಬದುಲಿನ ಬಗೆ. ಈ ಕನ್ನಡದ ಒಳನುಡಿಗಳಲ್ಲಿಹೊರಗೆ ಕಾಣದಿರುವ ನೆನಪುಗಳಿವೆ. ಅದೆಲ್ಲವೂ ಕನ್ನಡ ಮತ್ತು ಅದೇ ಕನ್ನಡ ಎನ್ನುವುದನ್ನು ಮರಳಿ ನೆನಪು ಮಾಡಿಕೊಳ್ಳಬೇಕು. ಬರೆಹ ಮತ್ತು ಸಾಹಿತ್ಯಕ್ಕೆ ಒತ್ತನ್ನು ನೀಡುವುದಾದರೆ ಆಗ ಮಾತಿನಲ್ಲಿ ಅಡಗಿರುವ ತಿಳುವಳಿಕೆಯನ್ನೆಲ್ಲ ಅನುಬಂಧವಾಗಿ ನೋಡುವ ಇಂದಿನ ಮಾದರಿಯೇ ಮುಂದೆಯೂ ನೆಲೆ ನಿಂತರೆ ಅಚ್ಚರಿಯೇನಲ್ಲ..
೪. ಏನೇ ಮಾಡಲಿ. ಆದು ಈವರೆಗೆ ನಡೆದಿರುವ ಓದಿನ ಚೌಕಟ್ಟನ್ನು ಬೆಳೆಸುವಂತಿರಬೇಕು. ಕನ್ನಡದಲ್ಲಿ ಹೇಳಿದ್ದನೇ ಹೇಳುವ ಬರೆದದ್ದನ್ನೇ ಬರೆಯುವ ಸವೆಕಲು ಹಾದಿ ಎಲ್ಲರ ಮನ್ನಣೆಯನ್ನು ಪಡೆದುಕೊಂಡುಬಿಟ್ಟಿದೆ. ಒಮ್ಮೆ ಮನ್ನಣೆ ದೊರಕಿದ ಬರೆಹಗಳು ಮತ್ತೆಮತ್ತೆ ಕಲಿಕೆಯ ಚೌಕಟ್ಟಿನೊಳಗೆ ನೆಲೆನಿಂತು ಹೊಸ ಚಿಂತನೆಗಳು ನುಗ್ಗದಂತೆ ನೋಡಿಕೊಳ್ಳುವುದು ಇಂದಿಗೂ ಮುಂದುವರೆದಿದೆ. ಒಂದು ಉದಾಹರಣೆಯನ್ನು ನೋಡಿ. ೧೯೨೮ರ ಸುಮಾರಿಗೆ ಹೊರಬಂದ ಮೈಸೂರು ವಿಶ್ವವಿದ್ಯಾಲಯದ ’ಕನ್ನಡ ಕೈಪಿಡಿ’ ಆಗ ಒಂದು ಬಲವಾದ ಆಕರಗ್ರಂಥವಾಗಿತ್ತು ತೊಂಬತ್ತು ವರ್ಷಗಳು ಕಳೆದರೂ ಅಲ್ಲಿಂದ ಮುಂದೆ ನುಡಿಯ ಚರಿತ್ರೆ,ಸೊಲ್ಲರಿಮೆ,ಛಂದಸ್ಸು ಇವೆಲ್ಲ ವಲಯಗಳಲ್ಲಿ ನಮ್ಮ ಅರಿವು ಹೆಚ್ಚಾಗಿದ್ದರೂ ಆ ಗ್ರಂಥದ ಚೌಕಟ್ಟಿನಿಂದ ನಮ್ಮ ವಿದ್ಯಾರ್ಥಿಗಳು ಹೊರಬಂದಿಲ್ಲ. ಆ ಹೊತ್ತಗೆಯನ್ನು ಮರಳಿ ಇಂದಿನ ತಿಳುವಳಿಕೆಯ ನೆಲೆಯಲ್ಲಿ ಮರಳಿ ಕಟ್ಟುವ ಕಡೆಗೂ ನಮ್ಮ ಬಲ್ಲವರು ಚಿಂತಿಸಿಲ್ಲ. ಕ್ಲಾಸಿಕಲ್ ಕನ್ನಡ ಅಧ್ಯಯನ ಇದೇ ಹಾದಿಯನ್ನು ಹಿಡಿಯಬಾರದು.
೫. ಈವರೆಗೆ ಕನ್ನಡ ತಿಳುವಳಿಕೆಯನ್ನು ಅರಿಯಲು ನಡೆಸಿಎಉವ ಎಲ್ಲ ಅಧ್ಯಯನಗಳನ್ನು ಒತ್ತಟ್ಟಿಗಿಟ್ಟು ನೋಡುವ ಕೆಲಸ ಮೊದಲಾಗಬೇಕು. ಯಾರು ಎಲ್ಲಿ ಏನೆಲ್ಲ ಕೆಲಸಗಳನ್ನು ಮಾಡಿದ್ದಾರೆ ಎಮಬುದನ್ನು ತಿಳಿಸಿಕೊಡುವ ಯಾವ ಆಕರಕೇಂದ್ರವೂ ಈಗ ಇಲ್ಲ. ಎಲ್ಲವೂ ಚದುರಿ ಹೋಗಿದೆ. ಎಷ್ಟೋ ಅಧ್ಯಯನಗಳ ಮಾಹಿತಿ ಮಾತ್ರ ನಮಗೆ ದೊರಕುತ್ತಿದೆ. ಆ ಅಧ್ಯಯನಗಳನ್ನು ನೋಡುವುದು ಕೂಡ ಈಗ ಆಗುತ್ತಿಲ್ಲ. ಇವೆಲ್ಲವನ್ನೂ ಒಂದೆಡೆಗೆ ಕೂಡಿಸಿ ವಿಂಗಡಿಸಿ ಕೊಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಯೋಜನೆಯೊಂದನ್ನು ರೂಪಿಸಬೇಕು. ಈಗ ಕೇವಲ ಹೊತ್ತಗೆಗಳನ್ನು ಕೂಡಿಸುವ ಕೆಲಸವಲ್ಲ; ಚದುರಿ ಹೋಗಿರುವ ಸಾವಿರಾರು ದಾಖಲೆಗಳನ್ನು ಒಂದಡೆಗೆ ತರುವ ಕೆಲಸ. ಸಾಂಸ್ಥಿಕವಾಗಿಯೇ ಇದು ನಡೆಯ ಬೇಕಿದೆ. ಇದು ಮೊದಲಾಗಬೇಕು.
೬. ಕನ್ನಡ ನಾಡಿನ ಜಾಣರು ಯಾವ ಬಗೆಯ ಅಧ್ಯಯನಗಳು ನಡೆಯ ಬೇಕು,ಹೇಗೆ ನಡೆಯಬೇಕು ಎಂಬುದನ್ನು ವಿವರಿಸುವ ಕೆಲಸವನ್ನು ಮಾಡಬೇಕಿದೆ. ಇದರಿಂದ ಮುಂದಿನ ತಲೆಮಾರು ಈ ಅಧ್ಯಯನಗಳನ್ನು ಕೈಗೊಂಡು ಮುನ್ನಡೆಯಲು ನೆರವಾಗುತ್ತದೆ. ಇದಕ್ಕಾಗಿ ಹಲವು ಬಗೆಯ ತರಬೇತಿಗಳನ್ನು ನೀಡಬೇಕಾಗಿ ಬರಬಹುದು. ಹೀಗೆ ತರಬೇತಿ ನೀಡುವಾಗ ಅಧ್ಯಯನದ ಗುರಿ ಮತ್ತು ಹಾದಿಗಳನ್ನು ತೋರಿಸುವ ಬಗೆ ಬದಲಾಗಬೇಕು. ನಮಗೆ ಯವುದು ಮುಖ್ಯವೋ ಅದೇ ಜನರಿಗೂ ಮುಖ್ಯ ಎಂಬ ಹಟವನ್ನು ನುಡಿಜಾಣರು ಕೈಬಿಡಬೇಕು. ಆನರಿ ಒಳಿತಿಗೆ ಏಣಾಗ ಬೇಕು ಎಂಬುದನ್ನು ಕಣ್ಣೆದುರಿಗೆ ಇರಿಸಿಕೊಳ್ಳದ ಮತ್ತು ಅವರ ಬದುಕಿನ ಹಾದಿಯನ್ನು ಒಳಗೊಳ್ಳದ ಇಂದಿನ ಎಷ್ಟೋ ಹಾದಿಗಳನ್ನು ನಾವು ಕೈಬಿಡಬೇಕಾಗಿದೆ.
೭. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದ ಹಲವಾರು ಆದ್ಯಯನಗಳು ಕನ್ನಡ ಬದುಕನ್ನೇ ಕುರಿತಾಗಿದ್ದರೂ ಅವೆಲ್ಲವೂ ಕನ್ನಡ ನುಡಿಯಲ್ಲಿ ಇಲ್ಲ. ಇಂಗ್ಲಿಶ್ ಮೊದಲಾಗಿ ಕೆಲವು ಯೂರೋಪಿನ ನುಡಿಗಳಲ್ಲಿವೆ. ಅವೆಲ್ಲವನ್ನು ಮತ್ತೊಮ್ಮೆ ಪರಿಶೀಲಿಸುವ ಕೆಲವನ್ನು ಕೈಗೊಳ್ಳಬೇಕು. ಈಗಲೂ ಕನ್ನಡ ಬದುಕನ್ನು ನೋಡುವ ನೂರಾರು ಅಧ್ಯಯನಗಳು ಕನ್ನಡ ನುಡಿಯಲ್ಲಿ ನಡೆಯುತ್ತಿಲ್ಲ. ಬೇರೆ ಬೇರೆ ನಾಡುಗಳ ಅಧ್ಯಯನಕಾರರು ಇಂಗ್ಲಿಶಿನಲ್ಲಿ ತಮ್ಮ ತಿಳುವಳಿಕೆಗಳನ್ನು ಮಂಡಿಸುತ್ತಿದ್ದಾರೆ. ಈ ತಿಳುವಳಿಕೆಗಳು ಕನ್ನಡದ ಓದಿನ ಭಾಗವಾಗಿ ಬದಲಾಗುತ್ತಿಲ್ಲ. ಹಾಗಾದಾಗ ಮತ್ರ ಅಂತಹ ಓದಿನ ಹೆಚ್ಚಳ ಮತ್ತು ಕೊರತೆಗಳು ಕಾಣ ತೊಡಗುತ್ತವೆ. ಒಂದು ನಿದರ್ಶನವನ್ನು ನೋಡೋಣ. ತೀರಾ ಈಚೆಗೆ ಅಮೆರಿಕದ ವಿದ್ವಾಂಸ ಫ್ರಾಂಕ್ಲಿನ್ ಸೌತ್ವರ್ತ್ ’ಲಿಂಗ್ವಿಸ್ಟಿಕ್ ಅಂತ್ರಪಾಲಜಿ ಆಫ್ ಸೌತ್ ಏಸಿಯಾ’ ಎಂಬ ತಮ್ಮ ಅಧ್ಯಯನ ಕೃತಿಯನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಅವರು ಕನ್ನಡದ ಮಾಹಿತಿಯನ್ನು ಬಳಸಿಕೊಂಡಿರುವುದು ತುಂಬಾ ಕಡಿಮೆ. ಅದರಲ್ಲೂ ಇಂಗ್ಲಿಶ್ ನುಡಿಯಲ್ಲಿ ದೊರಕುವ ಕನ್ನಡ ನುಡಿಯ ಮಾಹಿತಿಯನ್ನು ಮಾತ್ರ ಬಳಸಿಕೊಂಡಿದ್ದಾರೆ. ಕಿಟೆಲ್ ನಿಘಂಟು ಅವರಿಗೆ ಆಕರ ವಾಗುತ್ತದೆಯೇ ಹೊರತು, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟು ಅಲ್ಲ. ಹೀಗಾಗಿ ಆ ಅಧ್ಯಯನಕ್ಕೆ ಮಿತಿಗಳು ಒದಗಿವೆ. ಇದನ್ನು ನಿವಾರಿಸುವುದು ಹೇಗೆ? ಕನ್ನಡದ ಮಾಹಿತಿಯನ್ನು ಇಂಗ್ಲಿಶಿನಲ್ಲಿ ಒದಗಿಸುವ ವ್ಯವಸ್ಥೆಯನ್ನು ಮಾಡುವುದು ಒಂದು ದಾರಿಯಾಗಿ ಕಾಣುತ್ತದೆ. ಆದರೆ ಅದು ಸರಿಯಾದ ಹಾದಿಯಲ್ಲ. ಬದಲಿಗೆ ಇಂತಹ ಅಧ್ಯಯನಗಳನ್ನು ಕನ್ನಡದ ಮಾಹಿತಿಯ ಬೆಳಕಿನಲ್ಲಿ ಮರು ಪರಿಶೀಲನೆಗೆ ಗುರಿಪಡಿಸುವ ಕೆಲಸವನ್ನು ಕೈಗೊಳ್ಳುವುದು ಸರಿಯಾದ ಹಾದಿ ಯಾದೀತು. ಈ ಬಗೆಯ ಕೆಲಸಗಳು ಮೊದಲಾಗಬೇಕಿದೆ.
೮. ಎಲ್ಲವನ್ನೂ ಈ ಟಿಪ್ಪಣಿಯಲ್ಲಿ ಪಟ್ಟಿ ಮಾಡಲು ಆಗುವುದಿಲ್ಲ. ಕನ್ನಡ ನುಡಿಯು ಕನ್ನಡ ಬದುಕಿಗೆ ಸೇರಿದ್ದೆಂದು ತಿಳಿದು ನಮ್ಮ ಅಧ್ಯಯನಗಳನ್ನು ನಡೆಸುವ ಮೂಲಕ ಕ್ಲಾಸಿಕಲ್ ಕನ್ನಡವೆಂದರೆ ಅಲ್ಲೋ ಕೆಲವು ಬರೆಹಗಳ ದಾಖಲೆಗಳನ್ನು ಮತ್ತೆಮತ್ತೆ ಹಿಂಜುತ್ತ ಕೂರುವ ಕೆಲಸಗೇಡಿತನದಿಂದ ಹೊರಬರಬಹುದು. ದಿಟಬಾಗಿ ಬಾಯ್‌ಎರೆಯ ಕನ್ನಡಕ್ಕೆ ತಕ್ಕ ಮನ್ನಣೆಯನ್ನು ದೊರಕಿಸಲು ಆಗ ಅನುವಾದೀತು.

ಮಂಗಳವಾರ, ನವೆಂಬರ್ 15, 2011

ಒಂದು ಪ್ರತಿಕ್ರಿಯೆ

ನಿಮ್ಮ ಅಂಕಣ ಬರಹವನ್ನು ಓದಿದೆ. ಮೊದಲ ಓದಿಗೆ ಅಲ್ಲಿನ ವಿವರಗಳು ನಿಮ್ಮ ಮಾತಿಗೆ ಒಪ್ಪಿಗೆ ನೀಡಲು ಒತ್ತಾಯಿಸುತ್ತವೆ. ಈಚೆಗೆ ಕನ್ನಡದಲ್ಲಿ ನಡೆಯುತ್ತಿರುವ ಚರ್ಚೆಯ ಜತೆ ಹೆಜ್ಜೆ ಹಾಕುವ ನಿಮ್ಮ ಈ ಬರಹವನ್ನು ಓದಿದ ಮೇಲೆ ಅನಿಸಿದ ಕೆಲವು ಮಾತುಗಳನ್ನು ಇಲ್ಲಿ ಬರೆದಿದ್ದೇನೆ.

ಕನ್ನಡವೆಂಬುದು ಕನ್ನಡತನ ಎಂಬುದು ತಿರುಳೆಂದು ಏಕೆ ತಿಳಿಯಬೇಕು? ಅದು ಬಗೆ, ಇಲ್ಲವೇ ಬಗೆಯುವ ಪರಿ. ಹಾಗಾಗಿ ನೀರುಳ್ಳಿಯನ್ನು ಸುಲಿಯುತ್ತ ಹೋದಂತೆ ಏನೂ ಉಳಿಯುವುದಿಲ್ಲ ಎಂಬುದು ಹೇಗೋ ಹಾಗೇ ಕನ್ನಡ ಬದುಕಿನಲ್ಲಿ ’ಅನ್ಯ’ವಾದುದನ್ನು ಹೊರಗಿಡುತ್ತ ಹೋದಂತೆ ಏನೂ ಉಳಿಯುವುದಿಲ್ಲ ಎನ್ನುವ ನಿಮ್ಮ ಅನಿಸಿಕೆ ಕನ್ನಡವೆಂಬ ತಿರುಳನ್ನು ಹುಡುಕುವವರಿಗೆ ದಿಟವೆಂದು ತೋರಬಹುದು. ಆದರೆ ನೀರುಳ್ಳಿ ಸುಲಿಯುವಾಗ ಬರುವ ಕಂಪು ಮತ್ತು ಕಣ್ಣೀರು ದಿಟವಲ್ಲವೇ?ಅದೆ ಅದರ ಬಗೆಯಲ್ಲವೇ?

ಒಂದು ವೇಳೆ ಕನ್ನಡ ಬದುಕು ಹೊರಗಿನಿಂದ( ಹಾಗೆಂದು ತಿಳಿಯೋಣ) ಬಂದುದರಿಂದಲೇ ಕಟ್ಟಿದ್ದು ಎಂದು ತಿಳಿಯುವುದಾದರೆ ನನಗೆ ಅಂತಹ ಕನ್ನಡ ಬದುಕು ಕಾನೂರು ಹೆಗ್ಗಡತಿಯ ವಾಸುವಿನ ಚೀಲದಂತೆ ತೋರುತ್ತದೆ. ಅಲ್ಲಿ ಹತ್ತಾರು ಕೂಡಿ ಹಾಕಿದ ಸರಕುಗಳಿವೆ. ಗೋಲಿ,ಗಜ್ಜುಗ,ಹಣ್ಣು,ಹಕ್ಕಿ ಗರಿ,ಬಳಪ,ಪೆನ್ಸಿಲ್,ಚಾಟರ್ ಬಿಲ್ಲು ಹೀಗೆ ಒಂದರೊಡನೊಂದು ಸೇರದ,ಬೆರೆಯದ ಸರಕುಗಳು ಅವು.ಮಾಸಿವೆ,ಹಳತಾಗಿವೆ. ಕನ್ನಡ ಬದುಕು ಹೀಗೆ ಇದೆಯೆಂದು ತಿಳಿಯೋಣವೇ? ಪಡೆದದ್ದನ್ನು ತನ್ನದನ್ನಾಗಿ ಮಾಡಿಕೊಳ್ಳುವ ಬಗೆಯೊಂದು ಇದೆಯಲ್ಲವೇ? ಹಾಗಿಲ್ಲದೇ ಇದ್ದಲ್ಲಿ ’ಅನ್ಯ’ವನ್ನು ಪಡೆದ ಎಲ್ಲ ಬದುಕುಗಳು ಈ ನಾಡಿನಲ್ಲಿ ಒಂದೇ ಬಗೆಯಲ್ಲಿ ಇರಬೇಕಿತ್ತು. ಅಲ್ಲದೆ ಪಡೆದು ಕೊಂಡದ್ದ ಇಡಿಯಾಗಿ ಕನ್ನಡ ಬದುಕಿನೊಳಗೆ ಇಳಿದಿದೆಯೇ? ಹಾಗಿಲ್ಲದಿದ್ದಲ್ಲಿ ಬಂದದ್ದು ಹರಡುವ ಬಗೆಯನ್ನು ಯಾರು ,ಹೇಗೆ ಕಟ್ಟಿಹಾಕಿದರು? ಇದೆಲ್ಲವನ್ನೂ ನೋಡಬೇಕಲ್ಲವೇ?

ದೇಡಿ ಎಂಬುದು ಕೆಲವೊಮ್ಮೆ ತಿರುಳು ಎಂಬ ನೆಲೆಯಲ್ಲಿ ಬಳಕೆಯಾಗುತ್ತದೆ. ಅದನ್ನು ನಾವು ಯಾವಾಗಲೂ ’ಅಲ್ಲದ್ದು’ ಎಂಬ ನೆಲೆಯಲ್ಲೇ ಕಟ್ಟಿಕೊಂಡಿದ್ದೇವೆ. ಮಾರ್ಗವಲ್ಲದ್ದು ದೇಸಿ ಎನ್ನುತ್ತೇವೆ. ಮಾರ್ಗದ ಚೌಕಟ್ಟಿಗೆ ಸಿಗದುದು ದೇಸಿ ಎನಿಸಿ ಬಿಡುತ್ತದೆ. ಆದರೆ ದೇಸಿ ಎನ್ನುವುದನ್ನು ನಾವು ಇನ್ನೂ ಬಗೆವ ಪರಿ ಎಂಬಂತೆ ನೋಡೇ ಇಲ್ಲ. ದೇಸಿ ಎಂಬ ತಿರುಳನ್ನು ಹುಡುಕಲು ಹೊರಟರೆ ಕೊನೆಗೆ ಏನೂ ದೊರೆಯದೇ ಹೋಗಬಹುದು. ಆದರೆ ಕನ್ನಡದ ನೆಲೆಯನ್ನು,ಕನ್ನಡ ಬದುಕಿನ ಬಗೆವ ಪರಿಯನ್ನು ಹುಡುಕದೇ ಬೇರೆ ದಾರಿಯೇ ಇಲ್ಲ.ತಿಳಿ ಕದಡುವುದೆಂದು ಕೊಳವನ್ನು ಕಲಕದೇ ಇರುವುದು ಹೇಗೆ? ಕೊಳವನ್ನು ಕಲಕದೇ ಹಕ್ಕಿಗಳಿಗೆ ಬೇರೆ ದಾರಿಯೇ ಇಲ್ಲ.

ಸೋಮವಾರ, ಮಾರ್ಚ್ 28, 2011

ಕನ್ನಡ ಭಾಷಾಧ್ಯಯನ ಈವರೆಗೆ ಮತ್ತು ಮುಂದೆ


ಕನ್ನಡ ಭಾಷೆಯ ರಚನೆಯನ್ನು ಅರಿಯುವ ಕೆಲಸ ಮೊದಲಾಗಿ ಸಾವಿರದಿನ್ನೂರು ವರುಶಗಳೇ ಸಂದಿವೆ. ಈ ನುಡಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ ಮತ್ತೆ ಮತ್ತೆ ನುಡಿಯ ಕಟ್ಟೋನವನ್ನು ತಿಳಿಯುವ ಕೆಲಸವನ್ನು ಮಾಡುತ್ತಲೇ ಬರಲಾಗಿದೆ. ಸುಮಾರು ಅರವತ್ತು ವರುಶಗಳ ಹಿಂದೆ ಅರಿಮೆಯ ವಲಯಕ್ಕೆ ಭಾಷಾಶಾಸ್ತ್ರ ಬರತೊಡಗಿತು. ಇಲ್ಲಿನ ಕೆಲವು ನುಡಿಯರಿಗರು ಅಮೆರಿಕಾ ಇಂಗ್ಲೆಂಡ್ ಮುಂತಾದ ದೇಶಗಳಿಗೆ ಹೋಗಿ ಅಲ್ಲಿ ತಾವು ಕಲಿತ ಹೊಸ ತಿಳುವಳಿಕೆಯನ್ನು ಕನ್ನಡದಲ್ಲಿ ಹೇಳತೊಡಗಿದರು. ವಿಶ್ವವಿದ್ಯಾಲಯಗಳಲ್ಲಿ ಕಲಿಸುತ್ತಿದ್ದ ಹಲವರು ಭಾಷಾಶಾಸ್ತ್ರದ ಬೇಸಿಗೆ ಶಿಬಿರಗಳಿಗೆ ಹೋಗಿ ಹೊಸ ತಿಳುವಳಿಕೆಯನ್ನು ಪಡೆಯ ತೊಡಗಿದರು. ಇದರಿಂದೇನಾಯಿತು? ಕನ್ನಡ ನುಡಿಯ ರಚನೆಯನ್ನು ಅರಿಯಲು ಈ ಹೊಸ ತಿಳುವಳಿಕೆಯ ನೆರವನ್ನು ಪಡೆಯಬೇಕು ಎಂಬುವವರೊಂದು ಕಡೆಯಾದರೆ ಅಂತಹ ತಿಳಿವಿನ ನೆರವಿಲ್ಲದೆಯೂ ನಮ್ಮ ನುಡಿಯ ರಚನೆಯನ್ನು ಅರಿಯುವುದೇ ಸರಿ ಎಂದು ನಂಬಿದವರು ಇನ್ನೊಂದು ಕಡೆ ನಿಂತರು. ಈ ಎರಡೂ ಗುಂಪುಗಳ ನಡುವೆ ಈ ಐವತ್ತು ವರುಶಗಳಲ್ಲಿ ಹಲವಾರು ಮುಕಾಬಿಲೆಗಳಾಗಿವೆ.ಯಾರು ಗೆದ್ದರು ಎನ್ನುವದಕ್ಕಿಂತ ಇದರಿಂದ ಭಾಷಾಧ್ಯಯನ ಎಂಬುದು ಕನ್ನಡದಲ್ಲಿ ಹೊಸ ಹಾದಿಯಲ್ಲಿ ಸಾಗುವುದಕ್ಕೆ ಇದರಿಂದ ಅಡ್ಡಿಗಳಾದವು ಎನ್ನುವುದು ನೋವಿನ ಸಂಗತಿಯಾಗಿದೆ. ತಮಿಳು,ತೆಲುಗು ಮತ್ತು ಮಲೆಯಾಳಂ ನುಡಿಗಳಲ್ಲಿ ಕೂಡ ಇಂತಹ ಜಗಳಗಳು ನಡೆದಿವೆಯಾದರೂ ಅಲ್ಲೆಲ್ಲಾ ಹೊಸ ದಿಕ್ಕಿನಲ್ಲಿ ಸಾಗಿರುವುದನ್ನು ನೀಡುತ್ತಿದ್ದೇವೆ. ಆದರೆ ಕನ್ನಡದಲ್ಲಿ ಹಾಗಾಗಲಿಲ್ಲ.
ಅಂದರೆ ಕನ್ನಡ ನುಡಿಯ ಓದು ಭಾಷಾ ಶಾಸ್ತ್ರ ತೋರಿದ ಹೊಸ ದಾರಿಗಳಲ್ಲಿ ಸಾಗಿಲ್ಲ ಎಂದಲ್ಲ. ಆದರೆ ಆಂತಹ ಹೆಚ್ಚಿನ ಓದುಗಳಲ್ಲಿ ತೊಡಗಿಸಿಕೊಂಡವರು ಕನ್ನಡವನ್ನು ಚೆನ್ನಾಗಿ ಬಲ್ಲ ಈ ನಾಡಿನ ನುಡಿಯರಿಗರು ಮತ್ತು ಬೇರೆ ನಾಡುಗಳಲ್ಲಿದ್ದುಕೊಂಡು ಕನ್ನಡವನ್ನು ಹೊಸ ಬಗೆಯಲ್ಲಿ ಅರಿಯಲು ತೊಡಗಿದವರು ಸೇರಿದ್ದಾರೆ. ಮೊದಲ ಗುಂಪಿನಲ್ಲಿ ಎ.ಕೆ.ರಾಮನುಜನ್,ತಿರುಮಲೇಶ್.ಕೆ.ವಿ. ಅಮೃತವಲ್ಲಿ, ಶ್ರೀಧರ್.ಎಸ್.ಎನ್ ಮುಂತಾದವರು ಇದ್ದರೆ ಎರಡನೆಯ ಗುಂಪಿನಲ್ಲಿ ವಿಲಿಯಂ ಬ್ರೈಟ್,ಜಾನ್ ಗುಂಫರ್ಜ್, ಮಾರ್ಕ್ ಅರನಾಫ್ ಮುಂತಾದವರಿದ್ದಾರೆ. ಇವರೆಲ್ಲರೂ ತಮ್ಮ ಓದುಗಳನ್ನು ಮಂಡಿಸಿರುವುದು ಇಂಗ್ಲಿಶಿನಲ್ಲಿ. ಅವರ ಬರೆಹಗಳು ಕನ್ನಡ ನಾಡಿನ ಎಳೆಯ vಲೆಮಾರಿಗೆ ದೂರವೇ ಇಳಿದಿವೆ. ಅವುಗಳಿಂದ ಪಡೆದುಕೊಂಡದ್ದನ್ನು ತಮ್ಮ ಓದಿಗೆ ಬಳಸಿದ್ದು ಇಲ್ಲವೆನ್ನುವಷ್ಟು ಕಡಿಮೆ. ಇದೆಲ್ಲದರಿಂದ ಏನಾಯಿತು ಎಂಬುದನ್ನು ನೋಡೋಣ.
ಇದರ ಜೊತೆಗೆ ಎಲ್ಲಿ ಭಾಷಾ ಶಾಸ್ತ್ರವನ್ನು ಹೆಚ್ಚಿನ ಓದಿಗಾಗಿ ತೆರೆದಿಡಲಾಯಿತೋ ಅಂತಹ ಕಡೆಗಳಲ್ಲಿ ಏನನ್ನು ಓದ ಬೇಕು ಮತ್ತು ಯಾವ ನುಡಿಯಲ್ಲಿ ಕಲಿಯ ಬೇಕು ಎಂಬ ಮಾತು ಬಂದಾಗ ಮುಂಗಾಣ್ಕೆಯಿಲ್ಲದೆ ನಡೆದುಕೊಂಡಿರುವುದನ್ನು ಕಾಣುತ್ತೇವೆ. ಭಾಷಾ ಶಾಸ್ತ್ರ ವಿಷಯವನ್ನು ಇಂಗ್ಲಿಶಿನಲ್ಲಿ ಕಲಿಸುವ ಹಾದಿಯನ್ನು ಈಗಲೂ ಹಿಡಿಯಲಾಗುತ್ತಿದೆ. ಕಲಿಯುವವರು ತಮ್ಮದೇ ಬಗೆಯಲ್ಲಿ ಕನ್ನಡವನ್ನು ಬಳಸುತ್ತಿದ್ದಾರಾದರೂ ಇಂಗ್ಲಿಶಿನ ನೆರಳು ಈಗಲೂ ಕಾಡುತ್ತಿದೆ. ಜೊತೆಗೆ ಕನ್ನಡ ನುಡಿಯ ಓದನ್ನು ಈ ವಿಷಯವನ್ನು ಕಲಿಸುವ ಕಡೆಗಳಲ್ಲಿ ದೂರವಿರಿಸಲಾಗಿದೆ. ಭಾಷಾ ಶಾಸ್ತ್ರದಲ್ಲಿ ಎಂಎ ಪದವಿ ಪಡೆದ ಈ ನಾಡಿನ ಹುಡುಗರು ಕನ್ನಡ ನುಡಿ ರಚನೆಂiನ್ನು ವಿವರಿಸಲಾರದಾಗಿರುತ್ತಾರೆ. ಭಾಷಾ ಶಾಸ್ತ್ರದ ಹೊಸ ತಿಳಿವುಗಳು ಕನ್ನಡ ಓದಿನ ನೆಲೆಗಳಲ್ಲಿ ಬಳಕೆಯಾಗದಂತೆ ತಡೆಯುವಲ್ಲಿ ಇವೆಲ್ಲವೂ ಕಾರಣಗಳಾಗಿವೆ.
ಸೊಲ್ಲರಿಮೆಗಳು ಒಂದು ನುಡಿಯ ಕಟ್ಟುಗಳನ್ನು ವಿವರಸಬಲ್ಲವು.ದಿಟ. ಹಾಗೆ ಮಡುವಾಗ ಉಆವ ಚೌಕಟ್ಟುಗಳನ್ನು ಆ ನುಡಿಯನ್ನು ಅರಿಯಲು ತೊಡಗಿರುವ ನುಡಿಯರಿಗರು ಬಳಸುತ್ತಾರೆ ಎಂಬುದನ್ನು ನೋಡಬೇಕು. ಕನ್ನಡದ ಮಟ್ಟಿಗಂತೂ ಮೊದಮೊದಲ ನುಡಿಯರಿಗರು,ಅಂದರೆ ಶ್ರೀವಿಜಯನೇ ಮೊದಲಾಗಿ ಮುಂದೆ ಹತ್ತೊಂಬತ್ತನೆಯ ಶತಮಾನದವರೆಗೆ ಸಂಸ್ಕೃತದ ಚೌಕಟ್ಟನ್ನು ಬಳಸಿ ಕನ್ನಡವನ್ನು ನೋಡುವ ಬಗೆ ಒಪ್ಪಿಗೆಯನ್ನು ಪಡೆದಿತ್ತು. ಆ ಬಳಿಕ ಕ್ರೈಸ್ತ ಮಿಶನರಿಗಳು ಲ್ಯಾಟಿನ ನುಡಿಯ ಚೌಕಟ್ಟನ್ನು ಬಳಸಿ ಕನ್ನಡವನ್ನು ವಿವರಿಸ ತೊಡಗಿದರು. ಸಂಸ್ಕೃತ ಮತ್ತು ಲ್ಯಾಟಿನ್ ಆ ಹೊತ್ತಿಗಾಗಲೇ ಅಚ್ಚುಕಟ್ಟಾದ ಸೊಲ್ಲರಿಮೆಯ ಚೌಕಟ್ಟುಗಳನ್ನು ಹೊಂದಿದ್ದವು. ಆ ನುಡಿಗಳು ಜನರ ನುಡಿಗಳಾಗಿ ಉಳಿದಿರಲಿಲ್ಲ. ಆದ್ದರಿಂದ ಆ ನುಡಿಗಳ ಸೊಲ್ಲರಿಮೆಯ ಚೌಕಟ್ಟುಗಳಲ್ಲಿ ಬದಲಾವಣೆಗಳಾಗುವಂತಿರಲಿಲ್ಲ. ಬದಲಾವಣೆ ಇಲ್ಲದಿರುವುದನ್ನೇ ಎಲ್ಲ ನುಡಿಗಳಿಗೂ ಸಲ್ಲುವ ಗುರುತೆಂದು ತಿಳಿದು ನುಡಿಯರಿಗರು ಆ ಚೌಕಟ್ಟುಗಳನ್ನು ಎಲ್ಲ ನುಡಿಗಳನ್ನು ಅರಿಯಲು ಬಳಸ ತೊಡಗಿದರು. ಕನ್ನಡದ ಮಟ್ಟಿಗೂ ಇದೇ ಹಾದಿಯನ್ನು ಹಿಡಿಯಲಾಗಿದೆ.
ಭಾಷಾ ಶಾಸ್ತ್ರದ ತಿಳುವಳಿಕೆಗಳು ಲೋಕದ ನೂರಾರು ನುಡಿಗಳ ಸೊಲ್ಲರಿಮೆಗಳಲ್ಲಿ ಇರುವ ಬಗೆಗಳನ್ನು ಹೊರತಂದು ತೋರಿಸುತ್ತಿದ್ದಾವಾದರೂ ಅವೆಲ್ಲವನ್ನೂ ಅರಿತು ಕನ್ನಡದ ಓದಿಗೆ ಬಳಸುವ ತಾಳ್ಮ್ಮೆಯನ್ನು ಮತ್ತು ಮುಂಗಾಣ್ಕೆಯನ್ನು ನಮ್ಮ ನುಡಿಯರಿಗರು ಪಡೆಯಲೇ ಇಲ್ಲ. ಇದರಿಂದಾಗಿ ಯಾರಾದರೂ ಪೂರದ್ವ ಹಳಗನ್ನಡ ಎನ್ನುತ್ತೇವಲ್ಲ ಅದರ ಚಹರೆಗಳೇನು ಎಂದು ಕೇಳಿದರೆ ಎಂಬತ್ತು ವರುಶಗಳ ಹಿಂದೆ ಏನನ್ನು ಹೇಳುತ್ತಿದ್ದೇವೋ ಅದನ್ನೆ ಮರಳಿ ಮರಳಿ ಗಿಳಿಗಳಂತೆ ಉಲಿಯುತ್ತಿದ್ದೇವೆ. ಅವೇ ನಾಲ್ಕೈದು ಉದಾಹರಣೆಗಳನ್ನು ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದೇವೆ.
ಕನ್ನಡ ನುಡಿಯನ್ನು ಅರಿಯಲು ತೊಡಗಿರುವ ನಾಡಿನ ಮತ್ತು ಹೊಡನಾಡಿನ ನುಡಿಯರಿಗರು ಎರಡು ಮಾದರಿಗಳನ್ನು ಹೊಂದಿದ್ದಾರೆ. ಒಂದು ಮಾದರಿಯವರು ಭಾಷೆಯ ಸಾಮಾನ್ಯ ಗುರುತುಗಳೊಂದಿಗೆ ಕನ್ನಡ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ತೋರಿಸಲು ಮುಂದಾಗಿರುವವರು. ಅಂದರೆ ತಾವು ಒಪ್ಪಿರುವ ಮತ್ತು ಬಳಸುತ್ತಿರುವ ಭಾಷಾಶಾಸ್ತ್ರದ ಚೌಕಟ್ಟಿಗೆ ಕನ್ನಡ ಹೊಂದಿಕೊಳ್ಳುವ ಬಗೆಯನ್ನು ತೋರಿಸುತ್ತಿರುತ್ತಾರೆ. ಇಂತಹವರು ಹೆಚ್ಚಾಗಿದ್ದಾರೆ. ಹಾಗೆ ನೋಡಿದರೆ ವಿಶ್ವವಿದ್ಯಾಲಯಗಳಲ್ಲಿ ಈವರೆಗೆ ಕನ್ನಡ ನುಡಿಯನ್ನು ಅವಲಂಬಿಸಿ ನಡೆದಿರುವ ನೂರಾರು ಪಿಎಚ್.ಡಿ ನಿಬಂಧಗಳು ಇದೇ ಮಾದರಿಯಲ್ಲಿವೆ. ಎರಡನೆಯ ಗುಂಪಿನವರ ಮಾದರಿ ಬೇರೆ. ಅವರು ಈಗ ಒಪ್ಪಿತವಾಗಿರುವ ಭಾಷಾ ಶಾಸ್ತ್ರದ ಚೌಕಟ್ಟಿಗೆ ಹೊಂದಿಕೆಯಾಗುವ ಉದಾಹರಣೆಗಳು ಕನ್ನಡದಲ್ಲಿ ಇವೆಯೇ ಎಂದು ಹುಡುಕುತ್ತಿವವರು. ಅವರಿಗೆ ಭಾಷಾ ಶಾಸ್ತ್ರದ ಸಮ್ಮತಿ ಪಡೆದ ಚೌಕಟ್ಟುಗಳನ್ನು ಬದಲಿಸುವ ಮತ್ತು ಹೊಸ ಚೌಕಟ್ಟುಗಳನ್ನು ಹುಡುಕುವ ಬಯಕೆ ಇರುತ್ತದೆ. ಅದಕ್ಕಾಗಿ ಅವರು ಕನ್ನಡವನ್ನು ಉದಾಹರಣೆಯನ್ನಾಗಿ ಆಯ್ದುಕೊಂಡಿರುತ್ತಾರೆ. ಈ ಎರಡೂ ಗುಂಪಿನ ಕನ್ನಡ ಓದುಗಳ ನೆರವನ್ನು ಪಡೆದುಕೊಳ್ಳುವಲ್ಲಿ ನಾವು ಸೋತಿದ್ದೇವೆ.
೧. ಸರಿ. ಈಗೇನು ಮಾಡುವುದು? ಸೊಲ್ಲರಿಮೆಗಾರರು ಭಾಷಾ ಶಾಸ್ತ್ರದೊಡನೆ ತೆಗೆದಿರುವ ತಗಾದೆ ಬುಡವಿಲ್ಲ. ಇನ್ನಾದರೂ ತಪ್ಪು ತಿಳಿವಳಿಕೆಗಳು ಅಳಿಯಬೇಕು. ಅದಕ್ಕಾಗಿ ನಾವೀಗ ಭಾಷಾಶಾಸ್ತ್ರವನ್ನು ಕಲಿಸುವ ಬಗೆಯನ್ನು ಬದಲಾಯಿಸ ಬೇಕಾಗಿದೆ. ಶಾಲೆಗಳಿಂದ ಮೊದಲಾಗಿ ಈ ಬದಲಾವಣೆಯನ್ನು ತರಬೇಕು. ನಮ್ಮ ಶಾಲಾ ವ್ಯಾಕರಣಗಳನ್ನು ಹೊಸ ತಿಳಿವಿನ ಬೆಳಕಿನಲ್ಲಿ ಬರೆಯಬೇಕು. ಈಗ ಮಕ್ಕಳಿಗೆ ಕಲಿಸುತ್ತಿರುವವರಿಗೆ ಈ ಹೊಸ ಮಾದರಿಯ ಪರಿಕರಗಳನ್ನು ತಿಳಿಸುವ ಕೆಲಸವನ್ನು ಮೊದಲು ಮಾಡಬೇಕು. ಅದಕ್ಕಾಗಿ ಶಿಕ್ಷಕರ ತರಬೇತಿಯ ಠ್ಯಕ್ರಮದಲ್ಲಿ ಭಾಷೆಯ ಕಲಿಕೆಯ ಮಾದರಿಗಳನ್ನು ಬದಲಿಸಬೇಕು. ಅಂದರೆ ಹೊಸ ತಿಳಿವಿನ ಮಾದರಿಯನ್ನು ಆ ತರಬೇತಿಯಲ್ಲಿ ಅಳವಡಿಸಿದರೆ ಆಗ ಅದನ್ನು ಕಲಿತ ಉಪಾಧ್ಯಾಯರು ಮುಂದೆ ತರಗತಿಗಳಲ್ಲಿ ತಕ್ಕ ಹಾದಿಯನ್ನು ಹಿಡಿಯುತ್ತಾರೆ.
೨. ಕನ್ನಡವನ್ನು ವಿಶೇಷ ವಿಷಯವನ್ನಾಗಿ ಪದವಿ ತರಗತಿಗಳಲ್ಲಿ ಓದುವವರು ಕನ್ನಡ ಭಾಷೆಯ ರಚನೆಯನ್ನು ಅರಿಯಲು ಹಳಗನ್ನಡವನ್ನು ವಿವರಿಸುವ ಸಂಸ್ಕೃತದ ಚೌಕಟ್ಟಿನ ಸೊಲ್ಲರಿಮೆ ಗಳನ್ನು ಅವಲಂಬಿಸುವ ಬಗೆಯನ್ನು ಕೈ ಬಿಡಬೇಕು. ಹೊಸ ಸೊಲ್ಲರಿಮೆಯ ಮಾದರಿಯಲ್ಲಿ ಕನ್ನಡದ ರಚನೆಯನ್ನು ತಿಳಿಸಿ ಹೇಳಬೇಕು. ಕನ್ನಡ ಈಗಲೂ ಜನ ಬಳಸುತ್ತಿರುವ ನುಡಿ. ಅದರಲ್ಲಿ ದಿನದಿನವೂ ಬದಲಾವಣೆಗಳಾಗುತ್ತಿರುತ್ತವೆ. ಅದರಲ್ಲಿ ಹಲವು ಒಳನುಡಿಗಳಿವೆ. ಬಳಕೆಯ ಕಟ್ಟುಗಳಿವೆ. ಕನ್ನಡ ಬೇರೆ ಬೇರೆ ವಲಯಗಳಿಗೆ ಒಗ್ಗಿಕೊಳ್ಳುತ್ತಿರುವ ನುಡಿಯಾಗಿದೆ. ಕನ್ನಡ ಮಾತು ಮತ್ತು ಬರೆಹಗಳ ನಂಟು ಈಗ ಮೊದಲಿನಂತಿಲ್ಲ. ಇವೆಲ್ಲವನ್ನೂ ತಿಳಿಸಿಕೊಡುವ ಸೊಲ್ಲರಿಮೆ ಎಲ್ಲ ಕಲಿಯುವವರಿಗೆ ಸಿಗುವಂತಾಗ ಬೇಕು. ಅದಕ್ಕೆ ತಕ್ಕ ಪಠ್ಯ ಕ್ರಮ ಮತ್ತು ಓದಲು ನೆರವಾಗುವ ಹೊತ್ತಗೆಗಳನ್ನು ರಚಿಸ ಬೇಕು.
೩. ಇದೇ ಮಾದರಿಯನ್ನು ಬೇರೆ ಬೇರೆ ಹುದ್ದೆಗಳಿಗಾಗಿ ನಡೆಸುವ ಪರೀಕ್ಷೆಗಳ ಪಠ್ಯಕ್ರಮದಲ್ಲೂ ಅಳವಡಿಸಬೇಕು. ಈಗ ಕರ್ನಾಟಕ ಲೋಕ ಸೇವಾ ಆಯೋಗ, ಕೇಂದ್ರ ಲೋಕ ಸೇವಾ ಆಯೋಗಗಳು ನಡೆಸುತ್ತಿರುವ ಪರೀಕ್ಷೆಗಳಲ್ಲಿ ಕನ್ನಡ ನುಡಿಯ ತಿಳಿವನ್ನು ಕಂಡು ಕೊಳ್ಳು ನಿಡುವ ಕೇಳ್ವಿಗಳನ್ನು ಓದಿದಾಗ ನಗಬೇಕೋ ಅಳಬೇಕೋ ಎಂಬುದೇ ಗೊತ್ತಾಗುತ್ತಿಲ್ಲ. ಹೊಸ ಬಗೆಯಲ್ಲಿ ನಡೆಯಲು ಮುಂದಾಗುವ ಅಧ್ಯಾಪಕರೂ ಕೂಡ ಇಂತಹ ಪರೀಕ್ಷೆಗಳಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಲ್ಲಿ ತೊಂದರೆಯಾದೀತೋ ಎಂದು ಹಿಂಜರಿದು ಹಳೆಯ ಹಾದಿಯನ್ನೇ ಸವೆಸುತ್ತಿದ್ದಾರೆ. ಇದು ಬದಲಾಗಬೇಕು
೪. ಮೂವತ್ತು ನಲವತ್ತು ವರುಶಗಳ ಹಿಂದೆ ಭಾಷಾ ಶಾಸ್ತ್ರದ ತಿಳುವಳಿಕೆಯನ್ನು ನೀಡಲು ಮತ್ತು ಅ ಶಾಸ್ತ್ರದಲ್ಲಿ ಹೊಸ ವಿಚಾರಗಳನ್ನು ಮಂಡಿಸುವವರೊಡನೆ ಮಾತುಕತೆಯಾಡಲು ನೆರವಾಗುವ ಬೇಸಿಗೆ ಶಿಬಿರಗಳು ನಡೆಯುತ್ತಿದ್ದವು. ನಲವತ್ತು ದಿನಗಳ ಈ ಶಿಬಿರಗಳು ಹೊಡ ಅರಿವಿನ ಲೋಕದ ಬಾಗಿಲುಗಳನ್ನು ತೆರೆಯುತ್ತಿದ್ದವು. ಆದರೆ ಈಗ ಅಂತಹ ಬೇಸಿಗೆ ಶಿಬಿರಗಳು ನಡೆಯುತ್ತಿಲ್ಲ. ಇನ್ನಾದರೂ ಯಾವುದಾದರೂ ಒಂದು ಸಂಸ್ಥೆ ಈ ಹೊಣೆಯನ್ನು ತೆಗೆದುಕೊಳ್ಳಬೇಕು. ಹೊಸ ತಲೆಮಾರಿನವರಿಗೆ ಭಾಷಾ ಶಾಸ್ತ್ರದ ತಿಳಿವನ್ನು , ಆ ತಿಳಿವಿನ ಬೆಳಕಲ್ಲಿ ಕನ್ನಡವನ್ನು ವಿವರಿಸುವುದನ್ನು ಕಲಿಸ ಬೇಕು. ಇದು ಕನ್ನಡ ಮೂಲಕ ದೊರೆಯಬೇಕು ಎನ್ನುವುದನ್ನು ಮರೆಯಬಾರದು. ಈ ಬೇಸಿಗೆ ಶಿಬಿರಗಳು ಮುಂದಿನ ಹತ್ತು ವರುಶಗಳಾದರೂ ಬಿಡದೆ ನಡೆದರೆ ಆಗ ಬದಲಾವಣೆಗಳು ಕಾಣತೊಡಗುತ್ತವೆ.
೫. ಭಾಷಾ ಶಾಸ್ತ್ರವನ್ನು ಒಂದು ಆಯ್ದ ವಿಷಯವನ್ನಾಗಿ ಪದವಿ ತರಗತಿಗಳಲ್ಲಿ ಕಲಿಸುವುದೇನೋ ಸರಿ. ಆದರೆ ಅದನ್ನು ಕನ್ನಡದ ನೆಲೆಯಲ್ಲಿ ಮತ್ತು ಕನ್ನಡದ ಮೂಲಕ ಕಲಿಸುವ ಕೆಲಸ ಮೊದಲಾಗ ಬೇಕು. ಇಂಗ್ಲಿಶಿನ ಮೂಲಕ ಕಲಿತು ಹೊರ ನಾಡಿನಲ್ಲಿ ಭಾಷಾ ಶಾಸ್ತ್ರದ ಬೆಳವಣಿಗೆಗೆ ಮುಂದಾಗುವವರಿಗೆ ಇದರಿಂದ ಹಿನ್ನಡೆಯಾಗುವುದಿಲ್ಲವೇ ಎಂಬ ಹಳೆಯ ಸವೆದ ಕೇಳ್ವಿಯನ್ನು ಬದಿಗಿಡೋಣ. ಅಂತಹವರಿಗೆ ದಾರಿಗಳು ಹಲವಾರಿವೆ.ಅವುಗಳನ್ನು ಅವರು ಹುಡುಕಿಕೊಳ್ಳಬಲ್ಲರು. ನಮಗೀಗ ತುರ್ತಾಗಿ ಕನ್ನಡದಲ್ಲಿ ತಿಳಿವಳಿಕೆಯನ್ನು ಪಡೆದುಕೊಂಡು ಅದನ್ನು ತಮ್ಮ ಓದಿಗೆ ತಳಹದಿಯನ್ನಾಗಿ ಮಾಡಿಕೊಳ್ಳಬಲ್ಲವರು ಬೇಕಾಗಿದ್ದಾರೆ. ಹಾಗಾಗಿ ನಾವೀಗ ಇಂಗ್ಲಿಶ್ ಬೆನ್ನು ಹತ್ತಿರುವ ನಮ್ಮ ಹಾದಿಯನ್ನು ಬದಲಿಸಿಕೊಳ್ಳ ಬೇಕಿದೆ.
೬. ಸಾಹಿತ್ಯ ಮತ್ತು ಬೇರೆ ಬೇರೆ ಓದುಗಳಲ್ಲಿ ತೊಡಗಿರುವ ಹೆಚ್ಚಿನ ಓದಿನ ವದ್ಯಾರ್ಥಿಗಳಿಗೆ ಭಾಷಾ ಶಾಸ್ತ್ರದ ತಿಳುವಳಿಕೆ ನೀಡುವ ನಟ್ಟಿನಲ್ಲಿ ಹೆಜ್ಜಡಗಳನ್ನು ಇರಿಸ ಬೇಕು. ಸಮಾಜ ಶಾಸ್ತ್ರೆ, ಚರಿತ್ರೆ, ಮನೋವಿಜ್ಞಾನ, ತತ್ವ ಶಾಸ್ತ್ರ,ಮಾನವ ಶಾಸ್ತ್ರಗಳ ಮಟ್ಟಿಗಾದರೂ ಈ ಕೆಲಸ ಈಗ ಮೊದಲಿಗೆ ಬೇಕು. ಭಾಷಾ ಶಾಸ್ತ್ರ ಈ ಎಲ್ಲ ವಲಯಗಳಲ್ಲಿ ತನ್ನ ತಿಳುವಳಿಕೆಯ ಜಾಲವನ್ನು ಹರಡಿದೆ. ಆದರೆ ಅಲ್ಲಿ ಓದನ್ನು ಮುಂದುವರೆಸುವ ಹೋಣೆ ಭಾಷಾ ಶಾಸ್ತ್ರದ ಅರಿಗರ ಕೆಲಸ ಆಗಿದೆಯೇ ಹೊರತು ಉಳಿದ ಆಯಾ ವಲಯದ ಬಲ್ಲವರು ಭಾಷಾ ಸಾಶ್ತ್ರದ ತಿಳುವಳಿಕೆಯನ್ನು ಲೆಕ್ಕ್ಕಿಸುತ್ತಿಲ್ಲ. ಸಾಮಾಜಿಕ ಭಾಷಾ ಶಾಸ್ತ್ರ ಎನ್ನುವುದು ಭಾಷಾ ಶಾಸ್ತ್ರದ ಆಸಕ್ತಿಯಾಗಿದೆಯೇ ಹೊರತು ಸಮಾಜ ಶಾಸ್ತ್ರದವರಲ್ಲಿ ಆ ಕುರಿತು ಯಾವ ಆಸಕ್ತಿಯೂ ಇಲ್ಲ. ಇದು ಬದಲಾಗ ಬೇಕು.
೭. ಇವೆಲ್ಲವೂ ಶಿಕ್ಷಣದ ನೆಲೆಯಲ್ಲಿ ಕೈಗೊಳ್ಳ ಬೇಕಾಗಿರುವ ಯೋಜನೆಗಳು ಇದಲ್ಲದೆ ಕನ್ನಡದ ಓದುಉ ಯಾವ ದಿಕ್ಕಿನಲ್ಲಿ ಹರಿಯಬೇಕು ಮತ್ತು ಅದಕ್ಕಾಗಿ ಕೈಗೊಳ್ಳ ಬೇಕಾದ ಕೆಲಸಗಳೇನು ಎಂದು ಯೋಜಿಸುವ ಮತ್ತು ಜಾರಿಗೊಳಿಸುವ ಹೆಚ್ಚಿನ ಓದಿನ ಸಂಸ್ಥೆಯೊಂದನ್ನು ಕಟ್ಟ ಬೇಕಿದೆ. ಇದು ಹೊಸ ಸಂಸ್ಥೆಯೇ ಆಗ ಬೇಕೆಂದಿಲ್ಲ. ಈಗಿರುವ ಸಂಸ್ಥೆಗಳ ಹೊಣೆಯಾಗಿ ಇದನ್ನು ಅಳವಡಿಸಬಹುದು. ಅದಕ್ಕೆ ಬೇಕಾದ ನೆರವನ್ನು ಎಲ್ಲ ನಿಟ್ಟಿನಲ್ಲೂ ಪೂರೈಸುವ ಕೆಲಸ ಮೊದಲಾಗ ಬೇಕು
೮. ಕನ್ನಡ ಮೂಲ ದ್ರಾವಿಡ ನುಡಿಯಿಂದ ಏಕೆ ಮತ್ತು ಯಾವಾಗ ಬೇರೆಯಾಯಿತು, ಅದು ಒಂದೇ ಕಡೆ ಒಮ್ಮೆಗೇ ಬೇರೆಯಾಯಿತೇ ಇಲ್ಲವೇ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆಯಾಯಿತೇ ಎಂಬ ಕೇಳ್ವಿಗಳನ್ನು ಮುಂದಿರಿಸಿಕೊಂಡು ಓದನ್ನು ಬೆಳೆಸು ಕೆಲಸ ಈಗ ಮೊದಲಗ ಬೇಕು. ಆಗ ನಾವು ಒಪ್ಪಿಕೊಂಡು ಬಂದಿರುವ ಹಲವಾರು ನಿಲುವುಗಳನ್ನು ಬದಲಿಸಬೇಕಾಗಿ ಬರಬಹುದು. ಅಂದರೆ ಕನ್ನಡ ನುಡಿಯ ಚರಿತ್ರೆಯನ್ನು ಕಟ್ಟುವ ಕೆಲಸವನ್ನು ದೊಡ್ಡ ತಳಹದಿಯ ಮೇಲೆ ಮೊದಲು ಮಾಡಬೇಕಿದೆ.
೯. ಕನ್ನಡ ದಿನವೂ ಬದಲಾಗುತ್ತಿರುವ ನುಡಿಯಾದ್ದರಿಂದ ಅದರ ಓದಿಗೆ ನಾವು ಕಟ್ಟಿಕೊಂಡಿರುವ ಪರಿಕರಗಳನ್ನು ಒಂದೇ ಸಮನೆ ಬದಲಿಸುತ್ತಲೇ ಇರಬೇಕಾಗುತ್ತದೆ. ಕ್ನಡ ಪದನೆರಿಕೆಗೆ ಈಗ ನಾವು ಬರೆಹದ ಆಕರಗಳನ್ನು ಬಳಸುತ್ತಿದ್ದೇವೆ. ಮಾತಿನಲ್ಲಿ ದೊರಕುವ ಸಾವಿರಾರು ಪದಗಳನ್ನು ಅವುಗಳ ರೂಪಗಳನ್ನು ತಿರುಳುಗಳನ್ನು ನಾವು ನೋಡುತ್ತಲೇ ಇಲ್ಲ. ಇದು ಬೆಳೆಯುತ್ತಿರುವ ನುಡಿಯನ್ನು ಅರಿಯಲು ತಕ್ಕ ಹಾದಿಯಾಗದು. ಆದ್ದರಿಂದ ಅದಕ್ಕೆ ತಕ್ಕ ಪದನೆರಿಕೆಯೊಂದನ್ನು ಕಟ್ಟ ಬೇಕು ಮತ್ತು ಅದನ್ನು ಒಂದೇ ಸಮನೆ ಬೆಳೆಸುತ್ತಲೇ ಇರಬೇಕು. ಈ ನಿಟ್ಟಿನಲ್ಲಿ ತಕ್ಕ ಯೋಜನೆಗಳು ಜಾರಿಯಾಗಬೇಕು.
೧೦. ಹೊಸ ತಂತ್ರಜ್ಞಾನದ ನೆರವನ್ನು ಪಡೆದು ಅದಕ್ಕೆ ತಕ್ಕಂತೆ ನುಡಿಯನ್ನು ಹೊಂದಿ ಬೇಕಾಗಿದೆ. ಈ ದಿಕ್ಕಿನಲ್ಲಿ ಕನ್ನಡ ನುಡಿಯ ಹೆಜ್ಜೆಗಳು ದಿಕ್ಕಾಪಾಲಾಗಿವೆ. ಒಂದು ಕಡೆ,ಎಲ್ಲರಿಗೂ ನೆರವಾಗುವ ಮಾದರಿಗಳನ್ನು ಕಟ್ಟುವುದು ಆಗಿಲ್ಲ. ಹೊಸ ಕಾಲದ ಬೇಕುಗಳೇನು ಅದಕ್ಕೆ ಕನ್ನಡ ನುಡಿಯನ್ನು ಅಳವಡಿಸಲು ಯಾವೆಲ್ಲ ಹೆಜ್ಜೆಗಳನ್ನು ಇಡಬೇಕು ಮತ್ತು ಅದಕ್ಕೆ ತಂತ್ರಜ್ಞಾನದ ನೆರವನ್ನು ಪಡೆದುಕೊಳ್ಳಬೇಕು ಎಂಬ ಬಗೆಗೆ ತಕ್ಕ ಕೆಲಸಗಳನ್ನು ಹಮ್ಮಿಕೊಳ್ಳಬೇಕಾಗಿದೆ.
ಇವೆಲ್ಲವೂ ಕೆಲಸವು ಸೂಚನೆಗಳು ಮಾತ್ರ. ಬೇಡದ ಹಿಂಜರಿಕೆಯಿಂದ ಕನ್ನಡ ಈಗಾಗಲೇ ಹೊಸ ಹಾದಿಯ ನಡಿಗೆಯಲ್ಲಿ ಹಿಂದುಳಿದಿದೆ. ಅದೆಕ್ಲವನ್ನೂ ತುಂಬಿಕೊಮಡು ಎಲ್ಲ ನುಡಿಗಳೊಡನೆ ಸರಿಸಮನಾಗಿ ಹೆಜ್ಜೆ ಹಾಕಲು ಬೇಕಾಗಿರುವ ಕೆಲಸಗಳು ಇನ್ನೂ ನೂರಾರಿವೆ. ಅವೆಲ್ಲವನ್ನೂ ಇಲ್ಲ ಪಟ್ಟಿ ಮಾಡಲು ಆಗುವುದಿಲ್ಲ. ಆದರೆ ಈವರೆಗೆ ಆಗಿರುವ ಅಡ್ಡಿಗಳನ್ನು ಅರಿತು ಒಪ್ಪಿಕೊಂಡು ಅಲ್ಲಿಂದ ಹೊರಬಂದು ದಿಟ್ಟ ಹೆಜ್ಜೆಗಳನ್ನು ಇಡುವ ಮನಸ್ಸು ಈಗ ಬೇಕಾಗಿದೆ.

ಗುರುವಾರ, ಮಾರ್ಚ್ 24, 2011

ಕನ್ನಡದಲ್ಲಿ ಹೊಸ ಪದ


ಕನ್ನಡದಲ್ಲಿ ಹೊಸ ಪದಗಳನ್ನು ಕಟ್ಟಲು ಬಳಸುವ ಹಾದಿ ಹೀಗಿದೆ: ೧) ಇಂಗ್ಲಿಶಿನ ಪದರಚನೆಯನ್ನು ಮತ್ತು ಅದರಲ್ಲಿರುವ ಪದಗಳನ್ನು ಕನ್ನಡದ ಪದಗಳಲ್ಲಿ ಇಲ್ಲವೇ ಕನ್ನಡದಲ್ಲಿ ಬಳಕೆಯಲ್ಲಿರುವ ಬೇರೆ ನುಡಿಗಳ ಪದಗಳಲ್ಲಿ ಹೇಳುವುದು. ಇದಕ್ಕಾಗಿ ತರ‍್ಜುಮೆಯ ಹಾದಿಯನ್ನು ಹಿಡಿಯುವುದುಂಟು. ಹಸಿರು ನಿಶಾನೆ, ಬೆಳಕು ಚಲ್ಲು, ತಪ್ಪು ಸಂದೇಶ ರವಾನಿಸು, ಆಳವಾದ ಕಳಕಳಿ, ಸನ್ನಿವೇಶ ಗಂಭೀರ ಮುಂತಾದವು ಇಂತಹ ರಚನೆಗಳು ೨) ಹೀಗೆ ತರ‍್ಜುಮೆ ಮಾಡುವ ಬದಲು ಹೊಸ ಪದಗಳನ್ನು ಕನ್ನಡದ ಇಲ್ಲವೇ ಕನ್ನಡದಲ್ಲಿ ಬಳಕೆಯಲ್ಲಿರುವ ಪದಗಳ ನೆರವು ಪಡೆದು ಕಟ್ಟುವುದು. ಮುಂದಿನ ಪದರಚನೆಗಳನ್ನು ನೋಡಿ: ನೆರೆಪೀಡಿತ, ಬರಪೀಡಿತ, ನ್ಯಾಯಬದ್ಧ,ಅಶ್ರುತಪ್ತ, ಹಿಂಸಾಮುಕ್ತ,ಕರಮುಕ್ತ, ಕಾರಣೀಭೂತ, ರಜಾಪ್ರಯುಕ್ತ, ತಕ್ತ ಸಿಕ್ತ ಮುಂತಾದ ಪದಗಳಲ್ಲಿ ಎರಡೆರಡು ಪದಗಳಿವೆ. ಕೊನೆಯದನ್ನು ಮತ್ತೆ ಮತ್ತೆ ಬಳಸಿ ಹೊಸ ಹೊಸ ಪದಗಳನ್ನು ಕಟ್ಟಲಾಗುತ್ತದೆ.
ಇಂತಹ ಕೆಲವು ಪದಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:-ಇಕ,-ಕ, -ಕಾರ, -ಯೋಗ್ಯ, -ಯುಕ್ತ, -ಆಕಾಂಕ್ಷಿ, -ಆರೂಢ, -ಸ್ಥಿತ, -ಪೂರ‍್ಣ, -ಅನ್ವಿತ,- ಪೀಡಿತ, -ಭರಿತ, -ಉಕ್ತ, -ಬದ್ಧ, -ಮುಕ್ತ, -ಭುತ, -ಪ್ರಧಾನ, -ಪ್ರದಾನ, -ಪ್ರಯುಕ್ತ, -ಸಿಕ್ತ, -ಸಮ, --ಸಮಾನ, -ಕಾರಕ, -ಈನ, -ಹೀನ, -ಪೂರ‍್ವ, -ಪೂರ‍್ವಕ, -ರಹಿತ, -ಉತ್ತರ, - ಕರ, -ಮಯ, -ಈಯ, -ರಾಹಿತ್ಯ, -ಶೀಲ, -ಶಾಲಿ, -ವಾದ, -ವಾದಿ, -ವಂತ, -ಲೀನ, -ರಿಕ್ತ, -ತರ, -ಆತ್ಮಕ, -ಅರ‍್ಹ, -ಗ್ರಸ್ತ, -ಆಚಾರ, -ಅತೀತ, -ಪೂರಿತ, -ಕೃತ, -ಅರ‍್ಥಕ ಮುಂತಾದವು. ಇಂತಹ ಪದಗಳ ಪಟ್ಟಿ ಇನ್ನೂ ದೊಡ್ಡದಿದಿದೆ. ಇವುಗಳಲ್ಲಿ ಕೆಲವು ಬಿಡಿಯಾಗಿಯೂ ಬಳಕೆಯಗ ಬಲ್ಲವು;ಉಳಿದವು ಇನ್ನೊಂದು ಪದದ ಜೊತೆಗೆ ಮಾತ್ರ ಬರುತ್ತವೆ. ಇವೆಲ್ಲವನ್ನೂ ಬಳಸಿಯೇ ಹೊಸ ಪದಗಳನ್ನು ಕಟ್ಟುತ್ತಿದ್ದೇವಲ್ಲ. ಇದನ್ನು ಬಿಟ್ಟರೆ ಬೇರೆ ದಾರಿ ಇಲ್ಲವೇ?
ಇವಲ್ಲದೆ ಇನ್ನೂ ಕೆವು ಪದಗಳಿವೆ. ಮೇಲೆ ಪಟ್ಟಿ ಮಾಡಿ ಪದಗಳೆಲ್ಲ ಹೊಸ ಪದಗಳಲ್ಲಿ ಎರಡನೆಯ ಪದಗಳಾಗಿದ್ದರೆ ಈ ಹೊಸ ಪಟ್ಟಿಯ ಪದಗಳು ಮೊದಲಲ್‌ಏ ಬರುತ್ತವೆ. ಉಪ-, ಬಹು-, ಮಹಾ-, ಪೂರ‍್ವ-, ಉತ್ತರ-, ಸರ‍್ವ-, ಅ-, ನಿಃ-, ದುಃ-, ಸು-, ಸ-, ಪುನಃ-, ಪ್ರತಿ-, ಪರಿ-, ಸಿದ್ಧ- ಮುಂತಾದ ಕೆಲವು ಪದಗಳನ್ನು ಇಲ್ಲಿ ಪಟ್ಟಿ ಮಾಡಿದೆ. ಇದೂಣ ಮೊದಲ ಪಟ್ಟಿಯಂತೆ ದೊಡ್ಡದಲ್ಲ. ಅಲ್ಲದೆ ಇಲ್ಲಿ ಬರುವ ಹಲವು ಪದಗಳಿಗೆ ಬಿಡಿ ಬಳಕೆ ಇಲ್ಲ.
ಈಗ ನಾವೇನು ಮಾಡಬಹುದು. ಹೊಸ ಪದಗಳನ್ನು ಕಟ್ಟ ಬೇಕಾದಾಗ ಸವೆದ ಹಾದಿಯನ್ನು ಬಿಟ್ಟು ಕನ್ನಡದ ಪದಗಳನ್ನೇ ಬಳಸಿ ಕಟ್ಟುವ ಕಡಿದಾದ ಆದರೆ ನಾವು ತುಳಿಯಲೇ ಬೇಕಾದ ಹಾದಿಯನ್ನು ಹಿಡಿಯಬೇಕಾಗಿದೆ. ಕೆಲವು ಪದಗಳನ್ನು ಮಾದರಿಗಾಗಿ ಇಲ್ಲಿ ಕಟ್ಟ್ಟಿಕೊಡಲಾಗಿದೆ. ರಕ್ತಸಿಕ್ತ=ನೆತ್ತರು ಅಂಟಿದ, ಬಲಹೀನ=ಕಸುವಿಲ್ಲದ, ಆಶ್ಚರ‍್ಯಕರ= ಅಚ್ಚರಿ ತುಂಬಿದ, ಮಲಿನರಹಿತ= ಕೊಳೆ ಇಲ್ಲದ, ಸ್ವಯಂಕೃತ= ತಾನೇ ಮಡಿದ, ಬರಪೀಡಿತ= ಬರಹಿಡಿದ,ಬರಬಿದ್ದ, ಹೊಗೆಭರಿತ= ಹೊಗೆ ತುಂಬಿದ
ಹೀಗೆ ಏಕೆ ಮಾಡಬೇಕು? ೧) ಹೊಸ ಪದಗಳನ್ನು ಕಟ್ಟುವವರು ಆಗ ತಾವು ಕಟ್ಟಿ ಬಳಸುತ್ತಿರುವ ಪದದ ತಿರುಳು ಏನು ಎಂಬುದನ್ನು ಚೆನ್ನಾಗಿ ತಿಳಿಸುಕೊಳ್ಳು ಆಗುತ್ತದೆ. ೨) ಓದುವವರು ಇಲ್ಲವೇ ಕೇಳುವವರು ತಾವು ಓದುತ್ತಿರುವ ಇಲ್ಲವೇ ಕೇಳುತ್ತಿರುವ ಪದವನ್ನು ಸುಮ್ಮನೆ ನಂಬುವ ಬದಲು ಅದರ ತಿರುಳನ್ನು ತಾವೂ ಕೂಡ ಅರಿತು ಕೊಳ್ಳುವರು.

ಶನಿವಾರ, ಫೆಬ್ರವರಿ 5, 2011

ಕನ್ನಡ ಮುಂದಿನ ದಿನಮಾನಗಳಲ್ಲಿ ಉಳಿಯುವುದೇ; ಉಳಿದರೂ ಈಗಿರುವ ಅದರ ಚಹರೆಗಳನ್ನು ಕಾಯ್ದಕೊಳ್ಳುವುದೇ ಎಂಬ ಕಾತಾಳದಲ್ಲಿ ಹೂವಿನ ಪಕಳೆಗಳನ್ನು ಒಂದೊಂದಾಗಿ ಕೀಳುತ್ತ ಕುಳಿತಿರುವವರನ್ನು ನೀವು ಎಲ್ಲ ಕಡೆಗಳಲ್ಲೂ ಕಂಡಿರುತ್ತೀರಿ. ಇವರಲ್ಲಿ ಹಲವು ಬಗೆಯವರಿದ್ದಾರೆ. ಕೆಲವರು ಕನ್ನಡಕ್ಕೆ ಒದಗಿರುವ ಬಿಕ್ಕಟ್ಟುಗಳಿಂದ ಅದನ್ನು ಪಾರು ಮಾಡಲು ಏನು ಮಾಡಬೇಕೆಂಬ ಹಾದಿಗಳನ್ನು ಹುಡುಕುತ್ತಿರುವವರು ಕೆಲವರು. ಮತ್ತೆ ಕೆಲವರು ಆಗುವುದೆಲ್ಲ ಒಳ್ಳೆಯದಕ್ಕೆ ಅಲ್ಲವೇ ಎಂದು ಕೈಚೆಲ್ಲಿ ಕುಳಿತವರು. ಕನ್ನಡದ ಒಳಿತನ್ನು ಕಾಯ್ದುಕೊಳ್ಳ ಬೇಕೆಂದವರಲ್ಲಿ ಕೆಲವರು ಕನ್ನಡ ತನ್ನ ಮಡಿತನವನ್ನು ಬಿಟ್ಟುಕೊಡಬಾರದೆಂದೂ ಈಗಿರುವಂತೆ ಸಂಸ್ಕೃತದ ಸವಾರಿಗೆ ಹೆಗಲನ್ನು ಒಡ್ಡಿಕೊಂಡಿರಬೇಕೆಂದು ವಾದಿಸುವವರಿದ್ದಾರೆ. ಹಾಗೆ ನೋಡಿದರೆ ಕಲಿತವರು ಮತ್ತು ಬಲ್ಲವರಲ್ಲಿ ಹೆಚ್ಚು ಮಂದಿ ಇದೇ ಹಾದಿಯಲ್ಲಿ ಸಾಗುವುದೇ ಲೇಸು ಎನ್ನುತ್ತಾರೆ. ಆದರೆ ಇದು ಕನ್ನಡ ತನ್ನನ್ನು ತಾನು ಕೊಂದು ಕೊಳ್ಳುವ ಇರುಕಲಿನ ಹಾದಿಯೆಂಬುದನ್ನು ಅವರು ಅರಿತಂತಿಲ್ಲ. ಮಡಿಗನ್ನಡ ಕೆಲವರ ಕನ್ನಡ ಆಗಿ ಉಳಿದರೆ ಅದು ಎಂದಿಗೂ ಎಲ್ಲರ ಕನ್ನಡ ಆಗುವುದಿಲ್ಲ. ಒಳಗೊಳ್ಳುವ ಬಗೆಯನ್ನು ಒಪ್ಪಿಕೊಳ್ಳದೆ, ನುಡಿಯನ್ನು ದಿನದಿನವೂ ಬಳಸುವವರನ್ನು ಹೊರಗಿಟ್ಟರೆ ಆಗ ಕನ್ನಡದ ಏಳಿಗೆ ಎನ್ನುವುದು ಕನ್ನಡಿಯ ಗಂಟಾಗಿ ಬಿಡುತ್ತದೆ.
ಕನ್ನಡದ ಮುನ್ನಡೆಗೆ ಏನು ಅಡ್ಡಿಗಳಿವೆ ಎನ್ನುವುದನ್ನು ಅರಿಯೋಣ. ಮೊದಲಿಗೆ ಆಳುವವರಿಗೆ ಮತ್ತು ಉಳ್ಳವರಿಗೆ ಕನ್ನಡ ಬೇಕಾಗಿಲ್ಲ. ಆದರೆ ಸರಕು ಮಾರಾಟಗಾರರಿಗೆ ಕನ್ನಡ ಬೇಕಿದೆ. ಹಾಗಾಗಿಯೇ ಆಡಳಿತ ನಡೆಸುವವರು ಕನ್ನಡವನ್ನು ಕಡೆಗಣಿಸಿದರೂ ಅಲೆಯುಲಿ ಸೆಟ್ ಗಳನ್ನು ಮಾರುವ ಕಂಪನಿಗಳವರು ಕನ್ನಡವನ್ನು ಬಳಸಲು ನೆರವಾಗುವ ಸೆಲ್ ಫೋನ್ ಗಳನ್ನು ತಯಾರಿಸಿ ಮಾರುಕಟ್ಟೆಗೆ ತಂದಿಡುತ್ತಿದ್ದಾರೆ. ಹಾಲಿವುಡ್‌ನ ಹೆಚ್ಚು ಹಣಹೂಡಿಕೆಯ ಸಿನಿಮಾಗಳು ಕನ್ನಡದ ದನಿಯೊದನೆ ನುಗ್ಗಿ ಬರುವ ದಿನಗಳು ಹತ್ತಿರವಾಗುತ್ತಿವೆ. ಇದೆಲ್ಲವನ್ನು ನೋಡಿದಾಗ ಒಂದೆಡೆ ಕನ್ನಡ ಕೆಲವರಿಗೆ ಬೇಡದ ಹೊರೆ; ಅದು ತೇಲಲೀಯದ ಗುಂಡು. ಮತ್ತೆ ಕೆಲವರಿಗೆ ಹೇಗಾದರೂ ಮಾಡಿ ಜನರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಇರುವ ದಾರಿಯಾಗಿದೆ. ಇವೆರಡೂ ಒಂದೊಂದು ಬಗೆಯಲ್ಲಿ ಕನ್ನಡದ ಏಳಿಗೆಗೆ ತಡೆಗಳನ್ನು ತರುತ್ತಿವೆ.
ಆಡಳಿತ ನಡೆಸುವವರು ತಾವು ಜನರಿಗೆ ಹೊಣೆಗಾರರಲ್ಲ ಎಂದು ತಿಳಿದಿರುವುದರಿಂದ ಜನರ ನುಡಿಯನ್ನು ಕಡೆಗಣಿಸಿ ಇಂಗ್ಲಿಶಿಗೆ ಮೊರೆಹೋಗುತ್ತಿದ್ದಾರೆ. ಇದಕ್ಕೆ ಉಳ್ಳವರ ಒತ್ತಾಸೆಯೂ ಇದೆ. ಅವರ ಆಸೆಗಳನ್ನು ಪೂರೈಸಲು ಇಂಗ್ಲಿಶ್ ಎಲ್ಲರಿಗೂ ಬೇಕೆಂಬ ನಂಬಿಕೆಯನ್ನು ಈ ನೆಲದಲ್ಲಿ ಬೇರೂರಿಸಲಾಗುತ್ತಿದೆ. ಏನೇ ಮಾಡಿದರೂ ಇಂಗ್ಲಿಶ್ ಎಲ್ಲ ಕನ್ನಡಿಗರ ಮೊದಲ ನುಡಿಯಾಗುವ ಕಾಲ ಎಂದೆಂದು ಬರುವುದಿಲ್ಲ. ಅದು ಕೆಲವರ ಕೈಯಲ್ಲಿರುವ ಜಾದೂ ಕಡ್ಡಿ. ಎಲ್ಲರಿಗೂ ದೊರಕುವುದೆಂಬ ಆಸೆಯನ್ನು ಹುಟ್ಟಿಸಿ ಸವಾರಿ ಮಾಡಲು ಉಳ್ಳವರು ಸೊಂಟಕಟ್ಟಿ ನಿಂತಿದ್ದಾರೆ.ಇದರ ಜೊತೆಗೆ ಕಲಿಕೆಯ ಹಂತದಲ್ಲಿ ಮಡಿಗನ್ನಡಕ್ಕೆ ಮೊದಲ ಮಣೆಯನ್ನು ಹಾಕಿ ನುಡಿಯಲು ಅರಿಯಲು ತಿಳಿದಿರುವ ಕನ್ನಡದ ಮಕ್ಕಳು ಕನ್ನಡವನ್ನು ಓದಲು ಮತ್ತು ಬರೆಯಲು ಆಗದಂತೆ ಮಾಡುವ ಹಾದಿಯನ್ನು ಹಿಡಿಯಲಾಗಿದೆ. ಮಡಿಗನ್ನಡವೆಂದಾಗ ಅದು ಮೈಲಿಗೆಯನ್ನು ತಾಳಿಕೊಳ್ಳದ ಕನ್ನಡ ಎನ್ನುವ ತಿರುಳಿರುವಂತೆ ಅದು ಮಡಿಯಲು ಮುನ್ನುಗ್ಗುತ್ತಿರುವ ಕನ್ನಡವೆಂಬ ತಿರುಳೂ ಇದೆ ಎನ್ನುವುದನ್ನು ನೆನಪಿನಲ್ಲಿಡಬೇಕು. ಈ ಎರಡೂ ಬಗೆಗಳು ಕನ್ನಡದ ಏಳಿಗೆಗೆ ತಡೆಗಳನ್ನು ಒಡ್ಡುತ್ತಿವೆ.
ಇನ್ನು ಸರಕುಗಳನ್ನು ತಂದು ನಮ್ಮ ಮುಂದೆ ಹರಡುತ್ತಿರುವರಲ್ಲಿ ಕಾಣುತ್ತಿರುವ ಕನ್ನಡದ ಒಲವು ನಮ್ಮನ್ನು ಒಮ್ಮೆಗೆ ಮರುಳು ಮಾಡುವಂತಿದ್ದರೂ ಈ ಹಾದಿಯೂ ಕನ್ನಡವನ್ನು ಒಂದು ಹತ್ಯಾರವನ್ನಾಗಿ ಕಾಣುವುದೇ ಹೊರತು ಕನ್ನಡಿಗರ ಹಕ್ಕನ್ನಾಗಿ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಈ ಸರಕುದಾರರು ಬಳಸುವ ನುಡಿಯಲ್ಲಿ ಕನ್ನಡದ್ದೇ ಆದ ಬದುಕಿನ ನೋಟಗಳು ಕಣದಂತಾಗಿರುತ್ತವೆ. ಅಲ್ಲಿನ ಕನ್ನಡ ಮಾರುವವರು ಬಳಸುವ ದಂದುಗದ ಕನ್ನಡ. ಅದಕ್ಕೆ ನಾಳೆಗಳೂ ಇಲ್ಲ; ನಿನ್ನೆಗಳಂತು ಇರುವುದೇ ಇಲ್ಲ. ಈವರ ಈ ಬಗೆಯ ನುಡಿಯ ಬಳಕೆಯನ್ನು ತಡೆಯುವುದು ನಮ್ಮ ಅಳವನ್ನು ಮೀರಿದ್ದು. ಆದರೆ ಅದೇ ಕನ್ನಡದ ಏಳಿಗೆ ಎಂದು ಮೈ ಮರೆತು ಕೂರುವಂತಿಲ್ಲ.
ಹಾಗಿದ್ದಲ್ಲಿ ನಮಗಿರುವ ದಾರಿಗಳೇನು? ಮೊದಲನೆಯದಾಗಿ ನಮ್ಮ ಕನ್ನಡವೆಂದರೆ ಅದು ಎಲ್ಲರ ಕನ್ನಡವಾಗಬೇಕು ಎಂಬ ನಂಬಿಕೆಯನ್ನು ಬೆಳೆಸಿಕೊಳ್ಳ ಬೇಕು. ಕೆಲವರು ಮಾತ್ರ ಓದಿ ಅರಿತುಕೊಳ್ಳಬಲ್ಲ, ಕೆಲವರು ತಂತಮ್ಮಲ್ಲೇ ಮಾತಾಡಿಕೊಳ್ಳಬಲ್ಲ ಕನ್ನಡದ ಮಾದರಿಗೆ ಮನ್ನಣೆ ನೀಡುವುದನ್ನು ನಿಲ್ಲಿಸಬೇಕು. ಈಗ ನುಡಿಯುವುದು ಇಲ್ಲವೇ ಬರೆಯುವುದು ಎಂದರೆ ಅದು ಕೆಲವರು ಕೆಲವರೊಡನೆ ನಡೆಸುವ ಮಾತುಕತೆ ಎಂಬಂತಾಗಿದೆ. ಅಂದರೆ ಎಲ್ಲರೂ ಆ ಮಾತುಕತೆಯೊಳಗೆ ತಮ್ಮ ದನಿಯನ್ನು ಸೇರಿಸಲು ಮುಂದಾದರೆ ಅವರನ್ನು ಒಳಗೊಳ್ಳುವ ಬಗೆಯ ಕನ್ನಡವನ್ನು ಮೈಲಿಗೆಯ ಕನ್ನಡವೆಂದು ದೂರವಿರಿಸಲಾಗುತ್ತಿದೆ. ಅಲ್ಲದೆ ಮಾತಾಡಲಿ ಇಲ್ಲವೇ ಬರೆಯಲಿ ಅಲ್ಲೆಲ್ಲ ಕನ್ನಡ ಎನ್ನುವುದು ಜನರ ಗುರುತು ಎನ್ನುವುದನ್ನು ಈಗ ಮರೆತಿರುವಂತಿದೆ. ಅದು ಮಾತಾಡುವವರ ಇಲ್ಲವೇ ಬರೆಯುವವರ ಗುರುತು ಎಂದ ಮಾತ್ರ ತಿಳಿದು ಅದಕ್ಕೆ ತಕ್ಕ ನುಡಿಗಟ್ಟುಗಳನ್ನು ಕಟ್ಟಿಕೊಂಡು ಮುನ್ನಡೆಯಲಾಗುತ್ತಿದೆ. ಇದು ತಪ್ಪಬೇಕು.
ಹೀಗಾಗಲು ಏನು ಮಾಡಬೇಕು? ಮೊದಲನೆಯದಾಗಿ ಎಲ್ಲರ ಕನ್ನಡದಲ್ಲಿ ಕನ್ನಡದ ಬದುಕಿನ ನೋಟಗಳು ಕಾಣುವಂತಾಗಬೇಕು.ನಾವೀಗ ಏನು ಮಾಡುತ್ತಿದ್ದೇವೆ ಗೊತ್ತೇನು? ಲೋಕವನ್ನೆಲ್ಲ ಒಳಗೊಳ್ಳುವ ಇರಾದೆಯಲ್ಲಿ ಇಂಗ್ಲಿಶಿನ ನೋಟಗಳನ್ನು ಸಂಸ್ಕೃತದ ಪದಗಳಲ್ಲಿ ಇರಿಸಿ ಇಗೋ ಇದೇ ನಮ್ಮ ಕನ್ನಡ ಎಂದು ನಂಬಿಸಿದ್ದೇವೆ. ಕನ್ನಡದ ಪದಗಳನ್ನು ಅಯ್ದುಕೊಂಡು ಅ ಪದಗಳಲ್ಲಿ ನಮ್ಮ ನಿಲುವುಗಳನ್ನು ಕಟ್ಟಿಕೊಡಲು ಹೊರಟರೆ ಆಗ ನಾವು ಈವರೆಗೆ ಹಿಡಿದಿರುವ ಹಾದಿ ಮನ್ನುಗ್ಗುವ ಹಾದಿಯು ಹೊಸ ಮಾದರಿಯ ಕಾರುಗಳ ನಡೆಗೆ ಹೇಳಿ ಮಾಡಿಸಿದ ಹೆದ್ದಾರಿಯಂತಿದ್ದರೂ ಅಲ್ಲಿ ಹಸುಗಳನ್ನು ತರುಬಿಕೊಂಡು ನಡೆದು ಬರುವ ಕನ್ನಡಿಗನಿಗೆ ಜಾಗವಿಲ್ಲ ಎನ್ನುವುದು ಗೊತ್ತಾಗ ತೊಡಗುತ್ತದೆ. ಹೀಗೆಲ್ಲ ಮಾಡಿದರೆ ಕನ್ನಡ ನಲುಗಿ,ಬಡವಾಗಿ ಮೂಳೆ ಬಿಟ್ಟುಕೊಳ್ಳುತ್ತದೆ ಎಂದು ಕೆಲವರು ಹಲಬುತ್ತಿದ್ದಾರೆ. ಬೇಡದ ಕೊಬ್ಬನ್ನು ತುಂಬಿಕೊಂಡು ಮೆರೆಯುವುದಕ್ಕಿಂತ (ಹಾಗೆ ಕೊಬ್ಬಿದವರು ಕಣ್ಮನ ಸೆಳೆಯುವಂತಿದ್ದರೂ) ಮೂಳೆ ಬಿಟ್ಟುಕೊಂಡು ಬದುಕು ನಿಬಾಯಿಸುವುದೇ ಲೇಸು ಎನ್ನುವುದನ್ನು ಒಪ್ಪಬೇಕು. ಮತ್ತೆ ಕೆಲವರು ಹೀಗೆ ಮಾಡಿದರೆ ಕನ್ನಡದ ಚೆಲುವೆಲ್ಲ ಸೋರಿ ಹೋಗಿಬಿಡುವುದೆಂದು ಹಪಹಪಿಸುತ್ತಿದ್ದಾರೆ. ಅಂತಹವರು ತಮ್ಮ ಬತ್ತಳಿಕೆಯಲ್ಲಿ ಎಂದೂ ಬಳಸದ ಹತ್ಯಾರುಗಳನ್ನಾಗಿ ಸಂಸ್ಕೃತದ ಪದಗಳೆಂಬ ಬಾಣಬಿರುಸುಗಳನ್ನು ಇಟ್ಟುಕೊಂಡಿರಲಿ. ಕನ್ನಡಿಗರಿಗೆ ಗಿಡ ಮುರಿದು ಹಿಡಿದ ಕೋಲು ಸಾಕು. ಈ ಆಯ್ಕೆಯನ್ನು ಮಾಡಿಕೊಂಡರೆ ಆಗ ಈಗಿರುವ ಅಡೆತಡೆಗಳನ್ನು ಮಟ್ಟಿನಿಂತು ಕನ್ನಡ ಮನ್ನಡೆಯ ಬಲ್ಲುದು ಎನ್ನುವುದು ನನ್ನ ನಂಬಿಕೆ.